ಮುಂಬೈ: ಹಿಂದಿ ಮಾತನಾಡುವಾಗ ನನಗೆ ನಡುಕ ಹುಟ್ಟುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಿಂಜರಿಕೆಯಿಂದ ಆ ಭಾಷೆಯನ್ನು ಮಾತನಾಡುವುದಾಗಿ ಅವರು ಗುರುವಾರ ಹೇಳಿದ್ದಾರೆ.
ಹಿಂದಿ ವಿವೇಕ್ ಮ್ಯಾಗಜಿನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೀತಾರಾಮನ್, ತಾವು ಹಿಂದಿಯಲ್ಲಿ ಭಾಷಣ ಮಾಡುವುದಾಗಿ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದಾಗ ನಿಜಕ್ಕೂ ಅತ್ಯಂತ ಹಿಂಜರಿಕೆ ಅನುಭವಿಸಿದೆ ಎಂದು ಹೇಳಿದ್ದಾರೆ.
‘ಹಿಂದಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುವುದು ನನಗೆ ನಡುಕ ಹುಟ್ಟಿಸುತ್ತದೆ’ಎಂದು ಸೀತಾರಾಮನ್ ಹೇಳಿದರು.
ತಮಿಳುನಾಡಿನಲ್ಲಿ ಹುಟ್ಟಿ ಬೆಳೆದು, ಅಲ್ಲಿನ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ನಾನು, ಹಿಂದಿ ವಿರುದ್ಧದ ಆಂದೋಲನ ಮತ್ತು ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ವಯಸ್ಕರಾದ ನಂತರ ಒಬ್ಬ ವ್ಯಕ್ತಿಗೆ ಹೊಸ ಭಾಷೆಯನ್ನು ಕಲಿಯುವುದು ಕಷ್ಟ. ಆದರೂ ನಾನು ನನ್ನ ಗಂಡನ ಮಾತೃಭಾಷೆಯಾದ ತೆಲುಗನ್ನು ಕಲಿತಿದ್ದೆ. ಆದರೆ, ಹಿಂದಿನ ಘಟನೆಗಳಿಂದಾಗಿ ಹಿಂದಿಯನ್ನು ಕಲಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಆದರೂ, ಹಣಕಾಸು ಸಚಿವರು 35 ನಿಮಿಷಗಳ ಸಂಪೂರ್ಣ ಭಾಷಣವನ್ನು ಹಿಂದಿಯಲ್ಲೇ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.