ಶ್ರೀನಗರ: ಜಮ್ಮು–ಕಾಶ್ಮೀರದ ನೌಗಾಮ್ನಲ್ಲಿ ಪೊಲೀಸರ ಮೇಲೆ ನಡೆದ ಉಗ್ರ ದಾಳಿಯ ಹಿಂದೆ ಜೈಷ್ ಎ ಮೊಹಮ್ಮದ್ (ಜಿಇಎಂ) ಉಗ್ರ ಸಂಘಟನೆ ಕೈವಾಡವಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
‘ಇಬ್ಬರು ಉಗ್ರರು ಏಕಾಏಕಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಮಾಡಿದರು. ಘಟನೆಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಇಡೀ ಪ್ರದೇಶನ್ನು ಸುತ್ತುವರಿದಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ, ದಾಳಿ ನಡೆಸಿದವರು ಜಿಇಎಂ ಉಗ್ರರು ಎಂಬುದು ತಿಳಿದುಬಂದಿದೆ. ಅದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.
‘ದಾಳಿ ಸಾಧ್ಯತೆ ಬಗ್ಗೆ ನಮಗೆ ಸುಳಿವು ದೊರೆತಿತ್ತು. ಯಾವುದೇ ಪ್ರದೇಶದಲ್ಲಿ ದಾಳಿ ನಡೆಯಬಹುದು ಎನ್ನಲಾಗಿತ್ತು. ಪೊಲೀಸರು ಎಚ್ಚರಿಕೆಯಿಂದಿದ್ದರು. ಅಡಗಿದ್ದ ಭಯೋತ್ಪಾದಕನೊಬ್ಬ ಹಿಂದಿನಿಂದ ಗುಂಡಿನ ದಾಳಿ ಆರಂಭಿಸಿದ್ದ. ಆ ಪ್ರದೇಶದಲ್ಲಿ ಜನರ ಓಡಾಟವಿದ್ದುದರಿಂದ ಕೂಡಲೇ ಪ್ರತಿ ದಾಳಿ ನಡೆಸುವುದು ಪೊಲೀಸರಿಗೆ ಸಾಧ್ಯವಾಗಲಿಲ್ಲ. ನಾಗರಿಕರ ಜೀವಕ್ಕೆ ಅಪಾಯವಾಗಬಾರದುಎಂಬ ಕಾರಣಕ್ಕೆ ತಕ್ಷಣ ಪೊಲೀಸರು ಪ್ರತಿ ದಾಳಿ ನಡೆಸಲಿಲ್ಲ. ದಾಳಿ ನಡೆಸಿದ ಉಗ್ರನ ಗುರುತುಹಿಡಿಯಲಾಗಿದ್ದು, ಆತ ಜೆಇಎಂ ಉಗ್ರ ಎಂಬುದು ಗೊತ್ತಾಗಿದೆ. ಆತನನ್ನು ಶೀಘ್ರದಲ್ಲೇ ಮಟ್ಟಹಾಕುತ್ತೇವೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.