ನವದೆಹಲಿ: ತಿರುವುಗಳಲ್ಲಿ ಸಂಭವನೀಯ ಅಪಘಾತಗಳನ್ನು ತಪ್ಪಿಸುವುದು ಮತ್ತು ವ್ಯವಸ್ಥಿತವಾಗಿ ವಾಹನ ಸಂಚಾರವನ್ನು ನಿರ್ವಹಿಸಲು ನೂತನ ‘ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಂ’ ಅನ್ನು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿನ ಐಐಟಿಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಸಂಶೋಧಕರ ತಂಡದ ಪ್ರಕಾರ, ನೂತನ ವ್ಯವಸ್ಥೆಗೆ ಇನ್ನೂ ಹಕ್ಕುಸ್ವಾಮ್ಯ ಸಿಗಬೇಕಿದೆ. ಈ ವ್ಯವಸ್ಥೆಯಡಿ ವಾಹನಗಳ ವೇಗ ಗುರುತಿಸುವುದು, ವಾಹನಗಳ ಸಂಖ್ಯೆ ಲೆಕ್ಕಹಾಕುವುದು, ರಸ್ತೆ ಬಳಕೆಯ ಕ್ರಮ ಹಾಗೂ ಸಂಚಾರ ನಿರ್ವಹಣೆಯನ್ನು ಉತ್ತಮಪಡಿಸಲು ಬಳಸಬಹುದು. ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ತಂತ್ರಜ್ಞಾನ ಮತ್ತು ಮೈಕ್ರೊ–ಎಲೆಕ್ಟ್ರೊ ಮತ್ತು ಮೆಕ್ಯಾನಿಕಲ್ ಸಿಸ್ಟಮ್ ಅನ್ವಯಿಸಿ ಇದು ಕಾರ್ಯನಿರ್ವಹಿಸಲಿದೆ.
ವಾಹನಗಳ ಸಂಖ್ಯೆ ಏರಿದೆ. ವಾಹನ ಸಂಚಾರ ನಿರ್ವಹಣೆ ಮತ್ತು ಅಪಘಾತ ತಡೆಯುವುದು ಕಷ್ಟವಾಗಿದೆ. ಪ್ರತಿಬಿಂಬಕ ಕನ್ನಡಿಗಳ ಅಳವಡಿಕೆ, ಸಂಚಾರ ಪೊಲೀಸರ ನಿಯೋಜನೆ ಮಾಡಿದರೂ ಪೂರ್ಣ ನಿರ್ವಹಣೆ ಕಷ್ಟವಾಗಿದೆ. ತಿರುವುಗಳು ಇರುವ ಕಡೆ, ಮಳೆ ಅಥವಾ ಮಂಜುಕವಿದ ಸಂದರ್ಭಗಳಲ್ಲಿ ಅಪಘಾತ ತಡೆಯುವುದು ಕಷ್ಟವೇ ಎಂದು ಐಐಟಿ–ಮಂಡಿಯ ಸಹಾಯಕ ಪ್ರೊಫೆಸರ್ ಕೆ.ಕೆ.ಉದಯ್ ಹೇಳಿದರು.
ಉಲ್ಲೇಖಿಸಿದ ನೂತನ ವ್ಯವಸ್ಥೆ ಎರಡು ಹಂತದಲ್ಲಿ ಕಾರ್ಯನಿರ್ವಹಿಸಲಿದೆ. ಉಭಯ ದಿಕ್ಕಿನಿಂದ ಬರುವ ವಾಹನಗಳನ್ನು ಗುರುತಿಸಿ, ಚಾಲಕರಿಗೆ ಎಚ್ಚರಿಕೆ ನೀಡಲಿದೆ. ಎರಡು ಹಂತಗಳ ನಡುವೆ ವಾಹನ ಹಾದುಹೋದಂತೆ ಅದರ ವೇಗ, ದಿಕ್ಕು ಮತ್ತು ವಾಹನದ ಸ್ವರೂಪದ ಮಾಹಿತಿ ಕಲೆಹಾಕಲಿದೆ. ಮತ್ತೊಂದು ದಿಕ್ಕಿನಲ್ಲಿನ ವಾಹನಗಳಿಗೆ ಶಬ್ದ, ಬೆಳಕಿನ ಮೂಲಕ ಸಂದೇಶ ಕಳುಹಿಲಿದೆ. ವಾಹನದ ವೇಗ, ದಿಕ್ಕು, ವಾಹನದ ಸ್ವರೂಪ ಆಧರಿಸಿ ಸೂಚನೆಯೂ ರವಾನೆಯಾಗಲಿದೆ ಎಂದು ಅವರು ವಿವರಿಸಿದರು.
ಹೊಸ ವ್ಯವಸ್ಥೆಯಡಿ ವಾಹನಗಳ ಸಂಖ್ಯೆಯನ್ನು ಲೆಕ್ಕಹಾಕುವುದು ಮತ್ತು ವಾಹನಗಳ ತೂಕದ ಸಾಮರ್ಥ್ಯವನ್ನು ಗುರುತಿಸಬಹುದು. ಈ ಅಂಕಿ ಅಂಶ ಆಧರಿಸಿ ವಾಹನಗಳ ಸಂಚಾರ ನಿರ್ವಹಣೆ ಮಾಡಬಹುದಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.