ADVERTISEMENT

ಬಹುತೇಕರಲ್ಲಿ ಕೋವಿಡ್‌ ಪ್ರತಿಕಾಯ ಅಭಿವೃದ್ಧಿ: ತಜ್ಞರ ಹೇಳಿಕೆ

ಪಿಟಿಐ
Published 25 ಜುಲೈ 2021, 15:18 IST
Last Updated 25 ಜುಲೈ 2021, 15:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೊರೊನಾ ವೈರಸ್ ಸೋಂಕು ಮತ್ತು ಲಸಿಕೆಯ ಕಾರಣಕ್ಕಾಗಿ ಬಹುತೇಕರಲ್ಲಿ ಈಗಾಗಲೇ ಕೋವಿಡ್ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ. ಆದರೂ, ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ಎರಡನೇ ಅಲೆಯಲ್ಲಿ ಉಂಟಾದ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

‘ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಬಹುದು. ಆದರೆ, ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೋವಿಡ್‌–19ಗೆ ಸಂಬಂಧಿಸಿದ ಅಗತ್ಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ’ ಎಂದು ನವದೆಹಲಿಯ ಏಮ್ಸ್‌ನಲ್ಲಿ ಕೋವಿಡ್‌–19 ಐಸಿಯು ವಿಭಾಗವನ್ನು ನಿರ್ವಹಿಸುತ್ತಿರುವ ಡಾ.ಯಧ್ಯುವೀರ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಗಂಗಾ ರಾಮ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರರಾಗಿರುವ ಡಾ. ಪೂಜಾ ಖೋಸ್ಲಾ ಅವರು, ‘ಕೋವಿಡ್‌ನ 2ನೇ ಅಲೆಯು ಈಗಾಗಲೇ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ಅನ್ನುವ ಪಾಠವನ್ನು ಕಲಿಸಿದೆ. ಮೂರನೇ ಅಲೆಯು ಹತ್ತಿರದಲ್ಲಿರುವಾಗ ಎಲ್ಲ ವಹಿವಾಟುಗಳನ್ನು ಪುನರಾರಂಭಿಸುವುದು ಸೂಕ್ತವಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಲಸಿಕೆ ಮತ್ತು ಈ ಹಿಂದೆ ಕೋವಿಡ್ ಸೋಂಕಿಗೊಳಗಾಗಿರುವ ಕಾರಣದಿಂದಾಗಿ ಬಹುತೇಕರಿಗೆ ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಉಂಟಾಗಿದೆ. ಆದರೆ, ಇವನ್ನೂ ಮೀರಿಯೂ ಡೆಲ್ಟಾ ರೂಪಾಂತರದ ರೀತಿಯ ಸೋಂಕನ್ನು ಅಲ್ಲಗಳೆಯಲು ಸಾಧ್ಯವಿಲ್ಲ’ ಎಂದು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ಸಮುದಾಯ ಔಷಧ ವಿಭಾಗದ ಮುಖ್ಯಸ್ಥ ಡಾ.ಜುಗಲ್ ಕಿಶೋರ್ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.