ನವದೆಹಲಿ: ತಮ್ಮ ನೇಮಕಾತಿಯನ್ನು ಕಾಯಂಗೊಳಿಸದ ಕ್ರಮವನ್ನು ಪ್ರಶ್ನಿಸಿರುವ, ಸೇನೆಯಲ್ಲಿ ಅಲ್ಪಾವಧಿ ಸೇವೆಗೆ ನೇಮಕಗೊಂಡಿರುವ ಮಹಿಳಾ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡಬಾರದು. ದೇಶವು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಅವರ ನೈತಿಕತೆಯನ್ನು ಕುಗ್ಗಿಸುವುದು ಬೇಡ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
69 ಮಹಿಳಾ ಅಧಿಕಾರಿಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಎನ್. ಕೋಟೀಶ್ವರ ಸಿಂಗ್ ಅವರು ಇದ್ದ ನ್ಯಾಯಪೀಠ, ಮುಂದಿನ ವಿಚಾರಣೆ ವರೆಗೆ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ಸೂಚಿಸಿತು. ನಂತರ, ವಿಚಾರಣೆಯನ್ನು ಆಗಸ್ಟ್ಗೆ ಮುಂದೂಡಿತು.
‘ಇವರು ಪ್ರತಿಭಾವಂತ ಅಧಿಕಾರಿಗಳು. ಸೇನೆಯ ಬೇರೆ ವಿಭಾಗದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಬಹುದು. ದೇಶದಲ್ಲಿರುವ ಈಗಿನ ಪರಿಸ್ಥಿತಿಯನ್ನು ಪರಿಗಣಿಸಿದಾಗ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ, ಅವರು ಸುಪ್ರೀಂ ಕೋರ್ಟ್ಗೆ ಅಲೆದಾಡುವಂತೆ ಮಾಡುವುದು ಸರಿಯಲ್ಲ. ಇಂಥ ಕ್ರಮದಿಂದ ಅವರ ಆತ್ಮವಿಶ್ವಾಸವನ್ನು ಕುಂದಿಸುವುದು ಬೇಡ. ಉತ್ತಮ ಹುದ್ದೆಯಲ್ಲಿದ್ದುಕೊಂಡು ಅವರು ದೇಶ ಸೇವೆ ಮಾಡಬಹುದಾಗಿದೆ’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ವಿಚಾರಣೆ ವೇಳೆ, ‘ಸಶಸ್ತ್ರ ಪಡೆಗಳಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂಬ ಉದ್ದೇಶದಿಂದ ರೂಪಿಸಿರುವ ನೀತಿಯ ಭಾಗವಾಗಿ ಕೈಗೊಂಡಿರುವ ಆಡಳಿತಾತ್ಮಕ ನಿರ್ಧಾರ ಇದಾಗಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ನ್ಯಾಯಪೀಠಕ್ಕೆ ತಿಳಿಸಿದರು.
‘ಪ್ರತಿ ವರ್ಷ 250 ಸಿಬ್ಬಂದಿಯ ನೇಮಕಾತಿಯನ್ನು ಮಾತ್ರ ಕಾಯಂಗೊಳಿಸಲಾಗುತ್ತದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ತಡೆಯಾಜ್ಞೆ ನೀಡಬಾರದು’ ಎಂದು ಮನವಿ ಮಾಡಿದರು.
ಅರ್ಜಿದಾರರಾದ ಕರ್ನಲ್ ಗೀತಾ ಶರ್ಮಾ ಪರ ಹಾಜರಿದ್ದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವ ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಪ್ರಸ್ತಾಪಿಸಿದರು.
‘ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಕೋರಿ ಕರ್ನಲ್ ಖುರೇಷಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಈಗ ಅವರು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿಚಾರಣೆ ನಡೆಯುತ್ತಿರುವ ಪ್ರಕರಣ ಕಾನೂನಿಗೆ ಸಂಬಂಧಿಸಿದ್ದು. ಸೇನೆಯಲ್ಲಿನ ಅಧಿಕಾರಿಗಳ ಸಾಧನೆಗಳಿಗೂ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.