ರಾಯಗಢ: ‘ವಿದೇಶಿ ಶಕ್ತಿಗಳ ಒತ್ತಡಕ್ಕೆ ಮಣಿದ ಕಾಂಗ್ರೆಸ್, ಮುಂಬೈ ಭಯೋತ್ಪಾದಕ ದಾಳಿಯ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಲ್ಲಿ ಹೇಳಿದರು.
ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ, 2008ರಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗ ಪಿ.ಚಿದಂಬರಂ ಈಚೆಗೆ ನೀಡಿದ ಸಂದರ್ಶನದ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದರು.
‘ಉಗ್ರರ ದಾಳಿಯ ನಂತರ, ಆಗ ಕೇಂದ್ರ ಗೃಹ ಸಚಿವರಾಗಿದ್ದವರು ಈಚೆಗೆ ಸಂದರ್ಶನವೊಂದನ್ನು ನೀಡಿದ್ದು, 26/11ರ ಭಯೋತ್ಪಾದಕರ ಕೃತ್ಯದ ಬಳಿಕ ನಮ್ಮ ಸಶಸ್ತ್ರ ಪಡೆಗಳು ಸಹ ಪ್ರತಿ ದಾಳಿಗೆ ಸಿದ್ಧವಾಗಿದ್ದವು ಎಂದಿದ್ದಾರೆ. ಆದರೆ, ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳದಂತೆ ತಡೆದವರು ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.
‘ವಿದೇಶಿ ಶಕ್ತಿಗಳ ಒತ್ತಡಕ್ಕೆ ಮಣಿದ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸುವುದನ್ನು ತಡೆಯಿತು. ದೇಶದ ಜನರ ಭಾವನೆಗಳೊಂದಿಗೆ ಆಟವಾಡಿತು’ ಎಂದು ಅಮೆರಿಕ ಹಾಗೂ ಕಾಂಗ್ರೆಸ್ನ ಹಿರಿಯ ಮುಖಂಡರಾದ ಪಿ. ಚಿದಂಬರಂ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.
‘ಆಗಿನ ಸರ್ಕಾರ ಜಗತ್ತಿಗೆ ದುರ್ಬಲ ಸಂದೇಶವನ್ನು ರವಾನಿಸಿತು. ಉಗ್ರರ ಎದುರು ಮಂಡಿಯೂರಿತು. ಕಾಂಗ್ರೆಸ್ನ ಈ ನಿಲುವೇ ಭಯೋತ್ಪಾದಕರನ್ನು ಮತ್ತಷ್ಟು ಬಲಶಾಲಿಗಳನ್ನಾಗಿಸಿತು. ಇದರ ಪರಿಣಾಮ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಯಿತು. ದೇಶವು ಅಮಾಯಕ ಜನರ ಬಲಿ ಕೊಡಬೇಕಾಯಿತು’ ಎಂದು ಹರಿಹಾಯ್ದರು.
ದೇಶ ಜನರ ಸುರಕ್ಷತೆಯೇ ನಮ್ಮ ಆದ್ಯತೆ. ಇಂದಿನ ಭಾರತ ಶತ್ರುಗಳು ಅಡಗಿರುವ ತಾಣಕ್ಕೆ ನುಗ್ಗಿ ಸದೆಬಡಿಯಲಿದೆ. ಆಪರೇಷನ್ ಸಿಂಧೂರವೇ ಇದಕ್ಕೆ ಸಾಕ್ಷಿನರೇಂದ್ರ ಮೋದಿ ಪ್ರಧಾನಿ
ಮೋದಿ ಉದ್ಘಾಟಿಸಿದ ಪ್ರಮುಖ ಯೋಜನೆಗಳು...
* ₹19650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತ
* ₹12200 ಕೋಟಿ ವೆಚ್ಚದ ಮುಂಬೈ ಮೆಟ್ರೊ ಲೈನ್–3ರ ಎರಡು ಬಿ ಹಂತ
* ₹37270 ಕೋಟಿ ವೆಚ್ಚದ ಮುಂಬೈ ಮೆಟ್ರೊ ಲೈನ್ 3 (ಆಕ್ವಾ ಲೈನ್)
* ಮುಂಬೈ ಒನ್ ಆ್ಯಪ್ ಬಿಡುಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.