ADVERTISEMENT

ಪ್ರಧಾನಿ ಭರವಸೆಯಂತೆ ಪರಿಹಾರ ಸಾಮಗ್ರಿಯ ಮೊದಲ ಪ್ಯಾಕೇಜ್ ಭಾರತದಿಂದ ಟರ್ಕಿಗೆ ರವಾನೆ

ಪಿಟಿಐ
Published 7 ಫೆಬ್ರುವರಿ 2023, 7:36 IST
Last Updated 7 ಫೆಬ್ರುವರಿ 2023, 7:36 IST
ಟರ್ಕಿಗೆ ರವಾನೆಯಾಗುತ್ತಿರುವ ಪರಿಹಾರದ ಪ್ಯಾಕೇಜ್‌
ಟರ್ಕಿಗೆ ರವಾನೆಯಾಗುತ್ತಿರುವ ಪರಿಹಾರದ ಪ್ಯಾಕೇಜ್‌    

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ನೆರವಿನ ಭರವಸೆಯಂತೇ ಭಾರತವು ಭೂಕಂಪ ಪರಿಹಾರ ಸಾಮಗ್ರಿಯ ಮೊದಲ ಪ್ಯಾಕೇಜ್‌ಅನ್ನು ವಾಯುಪಡೆಯ ವಿಮಾನದ ಮೂಲಕ ಸೋಮವಾರ ರಾತ್ರಿ ಟರ್ಕಿಗೆ ರವಾನಿಸಿದೆ.

ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿ, ಸುಧಾರಿತ ಡ್ರಿಲ್ಲಿಂಗ್‌ ಉಪಕರಣಗಳು ಮತ್ತು ಸಾಧನ–ಸಲಕರಣೆಗಳನ್ನು ಒಳಗೊಂಡ ಪರಿಣತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಶೋಧ ಮತ್ತು ರಕ್ಷಣಾ ತಂಡವನ್ನು ಈ ಪ್ಯಾಕೇಜ್‌ ಒಳಗೊಂಡಿದೆ.

‘ಭಾರತದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿವೆ. ಭೂಕಂಪ ಪರಿಹಾರ ಸಾಮಗ್ರಿಯ ಮೊದಲ ಪ್ಯಾಕೇಜ್‌ ಟರ್ಕಿಗೆ ಹೊರಡುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದರು. ಭೂಕಂಪದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವನ್ನು ಟರ್ಕಿಗೆ ಒದಗಿಸುವಂತೆ ಅವರು ಭಾರತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತ ಸರ್ಕಾರದ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.