ನಾಗಪುರದ ಬ್ರಹ್ಮಕುಮಾರಿ ಸಂಘಟನೆಯ ವಿಶ್ವಶಾಂತಿ ಸರೋವರದ 7ನೇ ಸಂಸ್ಥಾಪನಾ ಕಾರ್ಯಕ್ರಮವನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶುಕ್ರವಾರ ಉದ್ಘಾಟಿಸಿದರು. ಸಂಘಟನೆಯ ಸಂತೋಷ್ ದೀದಿ, ಮೃತ್ಯುಂಜಯ ಇದ್ದರು
ಪಿಟಿಐ ಚಿತ್ರ
ನಾಗಪುರ: ‘ದೇಶವು ಆರ್ಥಿಕವಾಗಿ ಸದೃಢವಾಗಬಹುದು ಎಂಬ ಆತಂಕದಿಂದಲೇ, ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದರು.
‘ಇಂತಹ ಕ್ರಮಗಳು ಸ್ವಯಂ ಕೇಂದ್ರಿತ ವಿಧಾನದ ಪರಿಣಾಮಗಳಾಗಿವೆ’ ಎಂದು ಯಾವುದೇ ದೇಶದ ಹೆಸರು ಉಲ್ಲೇಖಿಸದೆ ಪ್ರಸ್ತಾಪಿಸಿದರು.
ಇಲ್ಲಿ ನಡೆದ ಬ್ರಹ್ಮಕುಮಾರಿಯ ‘ವಿಶ್ವಶಾಂತಿ ಸರೋವರ’ದ 7ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಭಾರತವು ಹೆಚ್ಚು ಶಕ್ತಿಶಾಲಿಯಾಗಿ ಬೆಳೆದರೆ ಏನಾಗಬಹುದೋ ಎಂದು ಇಡೀ ಜಗತ್ತು ಆತಂಕದಲ್ಲಿದೆ. ಹೀಗಾಗಿಯೇ, ಭಾರತದ ವಸ್ತುಗಳಿಗೆ ಹೆಚ್ಚು ಸುಂಕ ವಿಧಿಸಲಾಗುತ್ತಿದೆ. ಆದರೆ ನಾವೇನೂ ಮಾಡಿಲ್ಲ. ನೀವು ಏಳು ಸಮುದ್ರದಿಂದ ದೂರವಿರುವಾಗ, ಯಾವುದೇ ಸಂಪರ್ಕ ಇಲ್ಲದಿರುವಾಗ ನಮಗೇಕೆ ಭಯ’ ಎಂದು ಅವರು ಈ ವೇಳೆ ಪ್ರಶ್ನಿಸಿದರು.
ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ವಸ್ತುಗಳ ಮೇಲೆ ಅಮೆರಿಕವು ಶೇಕಡಾ 50 ಸುಂಕ ವಿಧಿಸುತ್ತಿದೆ. ಆದರೆ, ಇದು ಅನ್ಯಾಯ, ಅಸಮಂಜಸ ಎಂದು ಭಾರತವು ತಿರುಗೇಟು ನೀಡಿದೆ.
‘ಮನುಷ್ಯರು ಹಾಗೂ ದೇಶಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ನಮ್ಮ ಬಗ್ಗೆ ನಾವು ತಿಳಿದುಕೊಳ್ಳುವವರೆಗೂ ಈ ಸಮಸ್ಯೆಗಳಿಗೆ ಪರಿಹಾರ ದೊರಕುವುದಿಲ್ಲ. ನಾವು ಸಹಾನುಭೂತಿ ತೋರಿ, ಜಯಿಸಿದರೆ, ನಮಗೆ ಯಾರೂ ಶತ್ರುಗಳು ಇರುವುದಿಲ್ಲ’ ಎಂದು ಭಾಗವತ್ ತಿಳಿಸಿದರು.
‘ಮನುಷ್ಯರು ತಮ್ಮ ಮನೋಭಾವವನ್ನು ‘ನಾನು’ ಎನ್ನುವ ಬದಲಾಗಿ, ‘ನಾವು’ ಎಂದು ಬದಲಾಯಿಸಿಕೊಂಡರೆ, ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.