ADVERTISEMENT

ಕಾಶ್ಮೀರ ವಿಷಯ ಪ್ರಸ್ತಾಪ: ಪಾಕ್‌, ಒಐಸಿ ವಿರುದ್ಧ ಭಾರತ ವಾಗ್ದಾಳಿ

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಭೆ

ಪಿಟಿಐ
Published 15 ಸೆಪ್ಟೆಂಬರ್ 2021, 12:27 IST
Last Updated 15 ಸೆಪ್ಟೆಂಬರ್ 2021, 12:27 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ನವದೆಹಲಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನ ಹಾಗೂ ಇಸ್ಲಾಮಿಕ್‌ ಸಹಕಾರ ಸಂಘಟನೆ (ಒಐಸಿ) ವಿರುದ್ಧ ಭಾರತ ಬುಧವಾರ ವಾಗ್ದಾಳಿ ನಡೆಸಿತು.

‘ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಅವಕಾಶ ನೀಡಿರುವುದು ಮಂಡಳಿಯ ಅಸಹಾಯಕತೆಯನ್ನು ತೋರುತ್ತದೆ. ಅಲ್ಲದೇ, ತನ್ನನ್ನು ಪಾಕಿಸ್ತಾನ ಒತ್ತೆಯಾಳಂತೆ ನಡೆಸಿಕೊಳ್ಳಲು, ಮಂಡಳಿ ತಾನಾಗಿಯೇ ಅನುಮತಿ ಕೊಟ್ಟಂತಾಗಿದೆ’ ಎಂದೂ ಭಾರತ ಟೀಕಿಸಿದೆ.

ಮಂಡಳಿಯ 48ನೇ ಸಭೆಯಲ್ಲಿ ಮಾತನಾಡಿದ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಮೊದಲನೇ ಕಾರ್ಯದರ್ಶಿ ಪವರ್‌ ಬಢೆ ಅವರು, ‘ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಹಾಗೂ ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನದಿಂದ ಭಾರತ ಪಾಠ ಕಲಿಯುವ ಅಗತ್ಯ ಇಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

‘ಭಾರತದ ವಿರುದ್ಧ ಅಪಪ್ರಚಾರ ನಡೆಸುವ ಸಲುವಾಗಿ ಮಂಡಳಿ ಒದಗಿಸುವ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಪಾಕಿಸ್ತಾನದ ವ್ಯಸನವಾಗಿದೆ. ತನ್ನ ನೆಲದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಇಂಥ ತಂತ್ರಗಳ ಮೊರೆ ಹೋಗುತ್ತದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.