ADVERTISEMENT

ರಷ್ಯಾದಿಂದ ಖನಿಜಯುಕ್ತ ಕಲ್ಲಿದ್ದಲು ಆಮದು ದುಪ್ಪಟ್ಟು –ಭಾರತ ಚಿಂತನೆ

ಪಿಟಿಐ
Published 27 ಮಾರ್ಚ್ 2022, 11:21 IST
Last Updated 27 ಮಾರ್ಚ್ 2022, 11:21 IST
ರಾಮ್‌ ಚಂದ್ರ ಪ್ರಸಾದ್ ಸಿಂಗ್
ರಾಮ್‌ ಚಂದ್ರ ಪ್ರಸಾದ್ ಸಿಂಗ್   

ನವದೆಹಲಿ: ರಷ್ಯಾದಿಂದ ಖನಿಜಯುಕ್ತ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದನ್ನು ಭಾರತ ಮುಂದುವರಿಸಲಿದೆ ಎಂದು ಕೇಂದ್ರದ ಉಕ್ಕು ಖಾತೆ ಸಚಿವ ರಾಮ್‌ಚಂದ್ರ ಪ್ರಸಾದ್ ಸಿಂಗ್‌ ಅವರು ಭಾನುವಾರ ಹೇಳಿದರು.

ಉಕ್ಕು ಉತ್ಪಾದನೆಗೆ ಪ್ರಮುಖವಾಗಿ ಅಗತ್ಯವಿರುವ ಖನಿಜಯುಕ್ತ ಕಲ್ಲಿದ್ದಲು ಆಮದು ಪ್ರಮಾಣವನ್ನು ದುಪ್ಪಟ್ಟುಗೊಳಿಸಲೂ ಸರ್ಕಾರ ಚಿಂತನೆ ನಡೆಸಿದೆ. ಭಾರತವು ಒಟ್ಟಾರೆ 45 ಲಕ್ಷ ಟನ್‌ ಕಲ್ಲಿದ್ದಲು ಆಮದು ಮಾಡಿಕೊಂಡಿದೆ ಎಂದು ತಿಳಿಸಿದರು.

ಇಷ್ಟು ಪ್ರಮಾಣದ ಕಲ್ಲಿದ್ದಲನ್ನು ಯಾವ ಅವಧಿಯಲ್ಲಿ ಆಮದು ಮಾಡಿಕೊಳ್ಳಲಾಗಿದೆ ಎಂಬುದನ್ನು ಸಚಿವರು ಸ್ಪಷ್ಟವಾಗಿ ತಿಳಿಸಲಿಲ್ಲ.

ADVERTISEMENT

ಉಕ್ರೇನ್‌–ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಜಪಾನ್‌ ಹಾಗೂ ಪಶ್ಚಿಮದ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಶಸ್ತ್ರಾಸ್ತ್ರ ಸೇರಿದಂತೆ ರಷ್ಯಾದಿಂದ ವಿವಿಧ ಪರಿಕರ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾಗಿದೆ.

ಉಕ್ಕು ತಯಾರಿಕೆ, ಉಷ್ಣ ವಿದ್ಯುತ್‌ ಉತ್ಪಾದನೆಗೆ ಬಳಸುವ ಈ ಕಲ್ಲಿದ್ದಲುಯುದ್ಧದಿಂದಾಗಿ ರಷ್ಯಾದಿಂದ ಸುಗಮವಾಗಿ ಬರುತ್ತಿಲ್ಲ. ಸುಮಾರು 10.6 ಲಕ್ಷ ಟನ್‌ ಕಲ್ಲಿದ್ದಲು ಈ ತಿಂಗಳು ಭಾರತಕ್ಕೆ ರವಾನೆ ಆಗಬೇಕಿದೆ ಎಂದು ಅಂಕಿಅಂಶಗಳು ತಿಳಿಸಿದೆ.

ಭಾರತವು ರಷ್ಯಾದಿಂದ ಖನಿಜಯುಕ್ತ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಆರನೇ ಅತಿದೊಡ್ಡ ರಾಷ್ಟ್ರವಾಗಿದೆ. ವಿವಿಧ ರಾಷ್ಟ್ರಗಳು ನಿರ್ಬಂಧ ಹೇರಿರುವ ಕಾರಣ ಭಾರತ ಮತ್ತು ಚೀನಾದ ಖರೀದಿದಾರರಿಗೆ ಹೆಚ್ಚು ಸ್ಪರ್ಧಾತ್ಮಕ ದರದಲ್ಲಿ ನೀಡುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.