ನವದೆಹಲಿ: ‘ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಬಗ್ಗೆ ಇತರೆ ರಾಷ್ಟ್ರಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದರು.
‘ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವುದೇ ಸಿಎಎ ಉದ್ದೇಶ ಎನ್ನುವುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಇದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವುದಿಲ್ಲ’ ಎಂದು ರವೀಶ್ ಕುಮಾರ್ ಹೇಳಿದರು.
ಗುವಾಹಟಿಯಲ್ಲಿಸಿಎಎ ವಿರುದ್ಧದ ಪ್ರತಿಭಟನೆ ಕಾರಣದಿಂದ ರದ್ದುಗೊಂಡಿದ್ದ ಭಾರತ–ಜಪಾನ್ ಶೃಂಗಸಭೆಯ ದಿನಾಂಕವನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದರು.
ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು
ಪಣಜಿ: ಸಿಎಎ ಪರವಾಗಿರುವ ಗೋವಾ ಕಾಂಗ್ರೆಸ್ನ ನಾಲ್ವರು ಮುಖಂಡರು ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಣಜಿ ಕಾಂಗ್ರೆಸ್ ವಲಯ ಸಮಿತಿ ಮಾಜಿ ಅಧ್ಯಕ್ಷ ಪ್ರಸಾದ್ ಅಮೋನ್ಕರ್, ಕಾರ್ಯದರ್ಶಿ ದಿನೇಶ್ ಕುಬಲ್, ಮಾಜಿ ಯುವ ಕಾಂಗ್ರೆಸ್ ಮುಖಂಡ ಶಿವರಾಜ್ ತರ್ಕಾರ್ ಹಾಗೂ ಉತ್ತರ ಗೋವಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಾವೇದ್ ಶೇಖ್ ರಾಜೀನಾಮೆ ನೀಡಿದವರು. ಈ ಪೈಕಿ ಅಮೋನ್ಕರ್, ಕುಬಲ್ ಹಾಗೂ ತರ್ಕಾರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶುಕ್ರವಾರ ಬಿಜೆಪಿ ಇಲ್ಲಿ ಸಿಎಎ ಬಗ್ಗೆ ಜಾಗೃತಿ ರ್ಯಾಲಿ ನಡೆಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.