ನವದೆಹಲಿ: ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತೀಕಾರ ಮಾಡಲು ಹಾತೊರೆಯುತ್ತಿದ್ದ ಭಾರತ ತನ್ನ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಉಗ್ರರ ಶಿಬಿರದಮೇಲೆ ದಾಳಿ ನಡೆಸಿದೆ.
ಮಂಗಳವಾರ ಮುಂಜಾನೆ 3.30ರ ವೇಳೆ ಬಲಾಕೋಟ್ ಪ್ರದೇಶದಲ್ಲಿಭಾರತದ ವಾಯುಪಡೆ ಈದಾಳಿ ನಡೆಸಿದ್ದು ಜೈಷ್-ಎ- ಮೊಹಮ್ಮದ್ ಉಗ್ರರ ಶಿಬಿರಗಳು ಸಂಪೂರ್ಣವಾಗಿ ನಾಶವಾಗಿದೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಮಿರಾಜ್ ವಿಮಾನಗಳು ಈ ವೈಮಾನಿಕ ದಾಳಿ ನಡೆಸಿದ್ದು, 12 ಮಿರಾಜ್ 2000ಜೆಟ್ ವಿಮಾನಗಳು 1000 ಪೌಂಡ್ ತೂಕದಬಾಂಬ್ನಿಂದ ಗಡಿ ನಿಯಂತ್ರಣ ರೇಖೆಯಿಂದಾಚೆಯಿರುವ ಉಗ್ರರ ಶಿಬಿರಗಳನ್ನು ನಿರ್ನಾಮ ಮಾಡಿವೆ.
ಭಾರತೀಯ ಸೇನೆ ಗಡಿ ದಾಟಿದೆ ಎಂದು ಪಾಕಿಸ್ತಾನ ಆರೋಪಿದ ಬೆನ್ನಲ್ಲೇ ಭಾರತ ವೈಮಾನಿಕ ದಾಳಿ ನಡೆಸಿರುವ ಸುದ್ದಿ ಬಿತ್ತರವಾಗಿದೆ.
ಕೇಂದ್ರ ಸರ್ಕಾರ ಮತ್ತು ವಾಯುಪಡೆ ಇನ್ನೂ ಈ ವಿಚಾರವನ್ನು ಸ್ಪಷ್ಟಪಡಿಸಿಲ್ಲವಾದರೂ, 1971ರ ಯುದ್ಧದ ನಂತರ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ದೇಶದ ಗಡಿ ದಾಟಿರುವುದು ಇದೇ ಮೊದಲು.1999ರ ಕಾರ್ಗಿಲ್ ಸಂಘರ್ಷದ ವೇಳೆಯಲ್ಲಿಯೂವಾಜಪೇಯಿ ಸರ್ಕಾರ ಯುದ್ಧ ವಿಮಾನಗಳ ಕಾರ್ಯಾಚರಣೆಯಲ್ಲಿ ಭಾರತದ ವಶದಲ್ಲಿರುವ ಗಡಿ ನಿಯಂತ್ರಣ ರೇಖೆಗೆ ಸೀಮಿತಗೊಳಿಸಿತ್ತು.
ಭಾರತೀಯ ಯುದ್ಧವಿಮಾನಗಳು ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿವೆ ಮತ್ತು ಇದಕ್ಕೆ ಪಾಕ್ ವಾಯುಪಡೆ ಪ್ರತ್ಯುತ್ತರ ನೀಡಿ ಅವುಗಳನ್ನು ಹಿಮ್ಮೆಟ್ಟಿಸಿವೆ ಎಂದು ಪಾಕ್ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.