ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೀಡಿದ್ದ ಹೇಳಿಕೆಗೆ ಕೆನಡಾದ ಹೈಕಮಿಷನರ್ ಅವರಿಗೆ ಶುಕ್ರವಾರ ಸಮನ್ಸ್ ನೀಡಿದ ಭಾರತ, ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿತು.
‘ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವನ್ನು ಒಪ್ಪಲಾಗದು. ಈ ಧೋರಣೆ ಮುಂದುವರಿದಿದ್ದೇ ಆದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂಬುದಾಗಿ ಕೆನಡಾ ಹೈಕಮಿಷನರ್ಗೆ ತಿಳಿಸಲಾಯಿತು’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ಜಸ್ಟಿನ್ ಟ್ರುಡೊ, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕನ್ನು ಕೆನಡಾ ಸಮರ್ಥಿಸುತ್ತದೆ’ ಎಂದು ಹೇಳಿದ್ದರಲ್ಲದೇ, ದೆಹಲಿಯಲ್ಲಿನ ಪರಿಸ್ಥಿತಿ ಕಳವಳಕಾರಿ ಎಂದಿದ್ದರು.
‘ಪ್ರಧಾನಿ ಟ್ರುಡೊ ಸೇರಿದಂತೆ ಕೆಲವು ಮುಖಂಡರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ನೀಡಿದ ಹೇಳಿಕೆಗಳು ಕೆನಡಾದಲ್ಲಿನ ಭಾರತದ ಹೈಕಮಿಷನ್, ಕಾನ್ಸುಲೇಟ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ಕೆಲವು ತೀವ್ರಗಾಮಿಗಳಿಗೆ ಉತ್ತೇಜನ ನೀಡಿತ್ತು’ ಎಂದೂ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.