ನವದೆಹಲಿ: ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತ ರದ್ದುಪಡಿಸಿದೆ. ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಕೃತ್ಯಕ್ಕೆ ಪ್ರತಿಕ್ರಿಯಾತ್ಮಕ ಕ್ರಮವಾಗಿ ಈ ನಿಲುವು ತಳೆದಿದೆ.
ಭಾರತ ಸದ್ಯ ಪಾಕಿಸ್ತಾನಿ ಪ್ರಜೆಗಳಿಗೆ ನೀಡಿರುವ ವೀಸಾಗಳ ಅವಧಿಯು ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಮುಕ್ತಾಯವಾಗಲಿದೆ. ವೈದ್ಯಕೀಯ ವೀಸಾ ಏ. 29ರವರೆಗೆ ಮಾತ್ರ ಊರ್ಜಿತವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪ್ರಕಟಿಸಿತು.
ವೀಸಾದ ಅವಧಿ ಮುಗಿಯುವುದರ ಒಳಗೆ ಸದ್ಯ ಭಾರತದಲ್ಲಿ ನೆಲೆಸಿರುವ ಎಲ್ಲ ಪಾಕಿಸ್ತಾನಿಯರು ದೇಶವನ್ನು ತೊರೆಯಬೇಕು ಎಂದು ಭಾರತ ತಾಕೀತು ಮಾಡಿದೆ.
ಇದೇ ವೇಳೆ ಭಾರತೀಯರು ನೆರೆಯ ಪಾಕಿಸ್ತಾನಕ್ಕೆ ಹೋಗುವುದನ್ನು ಕೈಬಿಡಬೇಕು. ಅಲ್ಲದೆ, ಈಗಾಗಲೇ ಪಾಕಿಸ್ತಾನಕ್ಕೆ ಹೋಗಿರುವವರು ಆದಷ್ಟು ತ್ವರಿತಗತಿಯಲ್ಲಿ ದೇಶಕ್ಕೆ ಮರಳಬೇಕು ಎಂದು ಸಲಹೆ ಮಾಡಿದೆ.
ಉಗ್ರರ ದಾಳಿ ಕೃತ್ಯಕ್ಕೆ ಪಾಕಿಸ್ತಾನದ ನೇರ ಸಹಕಾರವಿದೆ ಎಂದು ಪ್ರತಿಪಾದಿಸಿರುವ ಭಾರತ, ಪ್ರತಿಕ್ರಿಯೆಯಾಗಿ ಬುಧವಾರ ಐದು ಕಠಿಣ ಕ್ರಮಗಳನ್ನು ಪ್ರಕಟಿಸಿತ್ತು. ವಾಘಾ ಗಡಿ ಬಂದ್, ಸಿಂಧೂ ನದಿ ನೀರಿನ ಹಂಚಿಕೆ ಒಪ್ಪಂದ ಅಮಾನತು ಇದರಲ್ಲಿ ಸೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.