ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಅತಿಕ್ರಮಣವನ್ನು ಖಂಡಿಸಿಲ್ಲ ಎಂದು ಭಾರತದ ನಿಲುವನ್ನು ಟೀಕಿಸಿದ್ದ ಐರೋಪ್ಯ ದೇಶಗಳು ಮತ್ತು ಅಮೆರಿಕಕ್ಕೆ ಭಾರತವು ತಿರುಗೇಟು ನೀಡಿದೆ. ‘ಏಷ್ಯಾ
ದಲ್ಲಿ ಚೀನಾದ ಯುದ್ಧ ಸ್ವರೂಪದ ನಡೆಗಳನ್ನು ಯೂರೋಪ್ ಕಡೆಗಣಿಸಿದೆ. ಅಫ್ಗಾನಿಸ್ತಾನದ ಎಲ್ಲಾ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ
ಎಸ್.ಜೈಶಂಕರ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ರೈಸೀನಾ ಮಾತುಕತೆಯಲ್ಲಿ ಮಂಗಳವಾರ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ. ಅದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ್ದ ನಾರ್ವೆ ವಿದೇಶಾಂಗ ಸಚಿವರು ರಷ್ಯಾ ಅತಿಕ್ರಮಣದ ವಿರುದ್ಧ ಭಾರತದ ನಿಲುವನ್ನು ಪ್ರಶ್ನಿಸಿದರು.ಸೋಮವಾರ ಸಭೆಯ ಆರಂಭದ ವೇಳೆ ಮಾತನಾಡಿದ್ದ ಐರೋಪ್ಯ ಕಮಿಷನ್ನ ಅಧ್ಯಕ್ಷೆ ಉರ್ಸುಲಾ ವನ್ ಡೆರ್ ಲೆಯೆನ್ ಅವರು ಭಾರತವು ರಷ್ಯಾದ ನಿಲುವನ್ನು ಖಂಡಿಸದೇ ಇರುವ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದರು.
ಈ ಎರಡೂ ಪ್ರತಿಪಾದನೆಗಳಿಗೆ ಜೈಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.‘ನೀವು ಉಕ್ರೇನ್ ಬಗ್ಗೆ ಮಾತನಾಡುತ್ತಿದ್ದೀರಿ. ಒಂದು ವರ್ಷದ ಹಿಂದೆ ಅಫ್ಗಾನಿಸ್ತಾನದಲ್ಲಿ ಏನಾಯಿತು ಎಂಬುದು ನನಗೆ ನೆನಪಿದೆ. ಈ ಜಗತ್ತು ಅಫ್ಗಾನಿಸ್ತಾನದ ಇಡೀ ನಾಗರಿಕರನ್ನು ಸಂಕಷ್ಟಕ್ಕೆ ದೂಡಿತ್ತು’ ಎಂದು ಹೇಳಿದ್ದಾರೆ. ಅಫ್ಗಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೊ ಸೈನಿಕರನ್ನು ವಾಪಸ್ ಕರೆಸಿಕೊಂಡು ತಾಲಿಬಾನ್ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟ ಒಪ್ಪಂದದ ಬಗ್ಗೆ ಅವರು ಹೀಗೆ ಹೇಳಿದ್ದಾರೆ.
ಜತೆಗೆ, ‘ಏಷ್ಯಾದಲ್ಲಿ 10 ವರ್ಷಗಳಿಗೂ ಹೆಚ್ಚುಕಾಲದಿಂದ ಒಪ್ಪಿತ ನಿಯಮಗಳಿಗೆ ಸವಾಲು ಎಸೆಯಲಾಗುತ್ತಿದೆ (ಚೀನಾದ ಅತಿಕ್ರಮಣ). ಆದರೆ ಅವರೊಂದಿಗೆ (ಚೀನಾದ ಜತೆ) ವ್ಯಾಪಾರ ವೃದ್ಧಿಸುವಂತೆ ಯೂರೋಪ್ ಸಲಹೆ ನೀಡಿತ್ತು’ ಎಂದು ಅವರು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.