ನವದೆಹಲಿ: ಅಂಡಮಾನ್–ನಿಕೋಬಾರ್ ದ್ವೀಪಗಳ ಸಮೀಪ ಭಾರತ ಮತ್ತು ಅಮೆರಿಕದ ನೌಕಾಪಡೆ ನಡೆಸಿರುವ ಜಂಟಿ ಕವಾಯತು ಭಾರತ–ಚೀನಾ ನಡುವಣ ಗಡಿ ವಿವಾದದ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಉಂಟು ಮಾಡದು ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಮಂಗಳವಾರ ಟ್ವೀಟ್ ಮಾಡಿದೆ.
ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಸಂಘರ್ಷದ ಸ್ಥಳಗಳಿಂದ ಸೇನೆಯ ವಾಪಸಾತಿಯನ್ನು ಚೀನಾವು ಉದ್ದೇಶ ಪೂರ್ವಕವಾಗಿ ನಿಧಾನ ಮಾಡಿದೆ ಎಂಬುದು ಭಾರತದ ಗಮನಕ್ಕೆ ಬಂದಿದೆ. ಅದರ ಬೆನ್ನಿಗೇ ‘ಗ್ಲೋಬಲ್ ಟೈಮ್ಸ್’ ಹೀಗೆ ಟ್ವೀಟ್ ಮಾಡಿದೆ.
ಎಲ್ಎಸಿಯಲ್ಲಿನ ಬಿಕ್ಕಟ್ಟು ಪರಿಹಾರಕ್ಕಾಗಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಎರಡೂ ದೇಶಗಳು ಈ ತಿಂಗಳ ಆರಂಭದಲ್ಲಿ ಒಪ್ಪಿಕೊಂಡಿದ್ದವು. ಆದರೆ, ಈ ಸೈನಿಕರ ವಾಪಸಾತಿ ಪ್ರಕ್ರಿಯೆಯು ಅನಿಶ್ಚಿತವಾಗಿದೆ ಎಂಬುದರ ಸುಳಿವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ನೀಡಿದ್ದರು.ಭಾರತದ ಗಡಿಯಲ್ಲಿ ಮಾತ್ರವಲ್ಲದೆ, ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಕೂಡ ಚೀನಾವು ಆಕ್ರಮಣ
ಕಾರಿ ಧೋರಣೆ ಪ್ರದರ್ಶಿಸಿರುವ ಹೊತ್ತಿನಲ್ಲಿಯೇ ಕವಾಯತು ನಡೆದಿದೆ.
ಎಚ್ಚರಿಕೆ ರವಾನೆ
ಮಲಕ್ಕಾ ಜಲಸಂಧಿಯಲ್ಲಿ ನಡೆಸಲಾದ ಜಂಟಿ ಸಮರಾಭ್ಯಾಸವು ಚೀನಾಕ್ಕೆ ನೀಡಿದ ನೇರ ಸಂದೇಶ. ಈ ಮಾರ್ಗವು ಚೀನಾಕ್ಕೆ ಅತ್ಯಂತ ಮಹತ್ವದ್ದಾಗಿದೆ. ಒಂದು ವೇಳೆ ಸಂಘರ್ಷವು ತೀವ್ರಗೊಂಡರೆ ಈ ಜಲಮಾರ್ಗದಲ್ಲಿ ಚೀನಾ ಹಡಗುಗಳ ಯಾನ ಕಷ್ಟ ಎಂಬ ಎಚ್ಚರಿಕೆಯ ರವಾನೆಯಾಗಿದೆ. ಆದರೆ, ಇದನ್ನು ಗಣನೆಗೇ ತೆಗೆದುಕೊಂಡಿಲ್ಲ ಎಂಬಂತೆ ಚೀನಾ ವರ್ತಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.