ADVERTISEMENT

ಪ್ರಧಾನಮಂತ್ರಿ ಸ್ವನಿಧಿ ಯೋಜನೆಗೆ ಉತ್ತಮ ಸ್ಪಂದನೆ: ಪ್ರಧಾನಿ ಮೋದಿಯಿಂದ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 8:25 IST
Last Updated 27 ಅಕ್ಟೋಬರ್ 2020, 8:25 IST
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಜೂನ್ 1 ರಂದು ಪ್ರಾರಂಭಿಸಲಾಯಿತು. ಪ್ರಾರಂಭವಾದಮೊದಲ ತಿಂಗಳಿಂದಲೇ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿಗಳು ಬರಲು ಪ್ರಾರಂಭಿಸಿದವು. ಭಾರತದಲ್ಲಿ ಯೋಜನೆಯೊಂದು ಇದೇ ಮೊದಲ ಬಾರಿಗೆ ವೇಗವಾಗಿ ಜನರನ್ನು ತಲುಪುತ್ತಿರುವುದನ್ನು ಕಾಣಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಜೂನ್ 1ರಂದು ಪಿಎಂ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಜುಲೈ 2ರಿಂದಲೇ ಇದಕ್ಕಾಗಿ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅರ್ಜಿಗಳು ಬರಲಾರಂಭಿಸಿದವು. ಇದೇ ಮೊದಲ ಬಾರಿಗೆ ದೇಶವು ಯೋಜನೆಯೊಂದಕ್ಕೆ ಈ ರೀತಿಯ ವೇಗವನ್ನು ನೋಡುತ್ತಿದೆ. ಬಡವರಿಗಾಗಿ ಘೋಷಣೆಯಾದ ಯೋಜನೆಗಳು ಇಷ್ಟು ವೇಗವಾಗಿ ಅವರನ್ನು ತಲುಪುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳಿಗೆ ಕೈಗೆಟುಕುವ ಸಾಲವನ್ನು ಒದಗಿಸಲು ಇಂತಹ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಬೀದಿಬದಿ ವ್ಯಾಪಾರಿಗಳಿಗೆ ನೆರವಾಗುವಂತೆ ಸರ್ಕಾರ ಜೂನ್ 1ರಂದು 'ಪಿಎಂ ಸ್ವನಿಧಿ' ಯೋಜನೆಯನ್ನು ಪ್ರಾರಂಭಿಸಿತ್ತು.

ADVERTISEMENT

ಕೆಲಸವನ್ನು ಕಾಗದರಹಿತವನ್ನಾಗಿಸಲು ಈ ಯೋಜನೆಗೆ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ. ಉತ್ತರ ಪ್ರದೇಶದ ಆರ್ಥಿಕತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಪಾತ್ರ ಬಹಳ ದೊಡ್ಡದಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉತ್ತರ ಪ್ರದೇಶದ ಸ್ವನಿಧಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಈ ಯೋಜನೆಯ ಸಹಾಯದಿಂದ ಬೀದಿ ಬದಿ ವ್ಯಾಪಾರಿಗಳು ಈಗ 'ಆತ್ಮನಿರ್ಭರ್' ಆಗುತ್ತಿದ್ದಾರೆ ಎಂದು ಹೇಳಿದರು.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.

ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ, ಯೋಜನೆಯಿಂದಾಗಿ ಅವರು ಸಂತೋಷವಾಗಿದ್ದಾರೆ ಎಂಬುದನ್ನು ನಾನು ಅರಿತುಕೊಂಡೆ. ಈ ಮೊದಲು ಜನರು ಸಾಲ ಪಡೆಯಲು ಅನೇಕ ಬಾರಿ ಬ್ಯಾಂಕುಗಳಿಗೆ ಭೇಟಿ ನೀಡಬೇಕಾಗಿತ್ತು. ಬಡ ಜನರು ಬ್ಯಾಂಕಿನೊಳಗೆ ಹೆಜ್ಜೆ ಹಾಕುವುದನ್ನು ಕೂಡ ಊಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಜನರು ತಮ್ಮ ಕೆಲಸವನ್ನು ಪ್ರಾರಂಭಿಸಲು ಸುಲಭವಾಗಿ ಸಾಲ ಪಡೆಯುತ್ತಿದ್ದಾರೆ ಎಂದರು.

'ಆತ್ಮನಿರ್ಭರ್ ಭಾರತ್'ಗೆ ಇದು ಮಹತ್ವದ ದಿನ ಎಂದು ಹೇಳಿದ ಪ್ರಧಾನಿ, ₹1.7 ಲಕ್ಷ ಕೋಟಿ ಮೌಲ್ಯದ' ಗರೀಬ್ ಕಲ್ಯಾಣ ಯೋಜನೆ' ಪ್ರಾರಂಭಿಸುವ ಮೂಲಕ ಕೇಂದ್ರವು ಬಡವರಿಗೆ ಸಹಾಯ ಮಾಡುವ ದಿಕ್ಕಿನಲ್ಲಿ ಕೆಲಸ ಮಾಡಿದೆ. ಬಡ ಜನರ ಕಲ್ಯಾಣಕ್ಕೆ ಆದ್ಯತೆ ನೀಡಲು ₹20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಲಾಯಿತು. ನಮ್ಮ ಬೀದಿ ಬದಿ ವ್ಯಾಪಾರಿಗಳು ಆತ್ಮನಿರ್ಭರ್ ಆಗುತ್ತಿದ್ದಾರೆ ಮತ್ತು ಮುಂದೆ ಸಾಗುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.