ನವದೆಹಲಿ: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಗಳಾದ ಬಜಾಜ್, ಹೀರೊ, ಟಿವಿಎಸ್ ಕೊಲಂಬಿಯಾದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಕಂಪನಿಗಳು ನಾವೀನ್ಯದಿಂದ ಗೆಲುವು ಸಾಧಿಸಬಹುದೇ ವಿನಾ ಸ್ವಜನಪಕ್ಷಪಾತದಿಂದಲ್ಲ ಎನ್ನುವುದನ್ನು ಈ ಮೂಲಕ ತೋರಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ದಕ್ಷಿಣ ಅಮೆರಿಕದ ನಾಲ್ಕು ದೇಶಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ‘ಬಜಾಜ್ ಪಲ್ಸರ್ ಬೈಕ್ ಮುಂದೆ ನಿಂತಿರುವ ಫೋಟೊವನ್ನು ‘ಎಕ್ಸ್’ನಲ್ಲಿ ಶುಕ್ರವಾರ ಹಂಚಿಕೊಂಡಿದ್ದಾರೆ.
‘ಕೊಲಂಬಿಯಾದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಜಾಜ್, ಹೀರೊ, ಟಿವಿಎಸ್ ನೋಡಲು ಹೆಮ್ಮೆಯಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇಐಎ ವಿಶ್ವವಿದ್ಯಾಲಯದಲ್ಲಿ ವಿಚಾರಸಂಕಿರಣ ಉದ್ದೇಶಿಸಿ ಮಾತನಾಡಿದ ಅವರು, ಮೂರರಿಂದ ನಾಲ್ಕು ಉದ್ಯಮಿಗಳು ಇಡೀ ಅರ್ಥವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ಯೋಜನೆಯ ವಿರುದ್ಧ ವಾಗ್ದಾಳಿ ನಡೆಸಿದರು.
‘ಭಾರತದ ಬಗ್ಗೆ ಆಶಾವಾದವಿದೆ. ಆದರೆ, ಅಲ್ಲಿನ ವ್ಯವಸ್ಥೆಯಲ್ಲಿ ದೋಷಗಳ ಎಳೆಗಳಿವೆ. ಅದರಿಂದ ಹೊರಬರದಂತೆ ಮಾಡುವ ಅಪಾಯಕಾರಿ ಧೋರಣೆಗಳಿದ್ದು, ದೇಶವು ಅವುಗಳಿಂದ ಹೊರಬರಲೇಬೇಕಿದೆ. ಮೊದಲನೇ ಅತಿದೊಡ್ಡ ಪಾಯಕಾರಿ ಧೋರಣೆ ಎಂದರೆ ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.