ನವದೆಹಲಿ: ಪೂರ್ವ ಲಡಾಖ್ನ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಆಕ್ರಮಣಕ್ಕೆ ಮುಂದಾದ ಚೀನಾ ಸೇನೆಯ ವಿರುದ್ಧ ಭಾರತೀಯ ಸೇನಾಪಡೆಗಳು ಧೈರ್ಯದಿಂದ ಹೋರಾಡಿ, ಅವರನ್ನು ಹಿಮ್ಮೆಟ್ಟುವಂತೆ ಮಾಡಿದವು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಎಫ್ಐಸಿಸಿಐ ಕೈಗಾರಿಕಾ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಹಿಮಾಲಯದ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣಶೀಲತೆಯನ್ನು ಉಲ್ಲೇಖಿಸಿಸುತ್ತ, ಇವೆಲ್ಲ ಜಗತ್ತು ಹೇಗೆ ಬದಲಾಗುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಹೇಗೆ ಪ್ರಶ್ನಿಸಲಾಗುತ್ತಿದೆ ಎಂಬುದನ್ನು ತೋರಿಸುತ್ತವೆ ಎಂದು ಅವರು ತಿಳಿಸಿದರು.
ಪೂರ್ವ ಲಡಾಖ್ನ ಗಡಿಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯೊಂದಿಗೆ ಅತ್ಯಂತ ಧೈರ್ಯದಿಂದ ಹೋರಾಡಿದ ಭಾರತೀಯ ಪಡೆಗಳ ಕಾರ್ಯವನ್ನು ಅವರು ಇದೇ ವೇಳೆ ಶ್ಲಾಘಿಸಿದರು. ಈ ಬಗ್ಗೆ ದೇಶದ ಮುಂದಿನ ಪೀಳಿಗೆ ಹೆಮ್ಮೆ ಪಡುತ್ತದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.
‘ಜಗತ್ತಿನಲ್ಲಾಗುತ್ತಿರುವ ಬದಲಾವಣೆಯಿಂದ ಭವಿಷ್ಯ ಎಷ್ಟು ಅನಿಶ್ಚಿತವಾಗಿರಬಹುದು ಎನಿಸುತ್ತಿದೆ‘ ಎಂದ ರಾಜನಾಥ್ ಸಿಂಗ್, ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸಶಸ್ತ್ರ ಪಡೆಗಳ ಬಹುದೊಡ್ಡ ಪಡೆಯನ್ನೇ ನಿಯೋಜನೆಗೊಳಿಸಲಾಗಿದೆ‘ ಎಂದರು.
ಇದೇ ವೇಳೆ ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಉಲ್ಲೇಖಿಸಿದ ರಾಜನಾಥ್ ಸಿಂಗ್, ‘ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುವಂತಹ ಕ್ರಮಗಳನ್ನು ಕೈಗೊಳ್ಳುದಿಲ್ಲ. ಹಾಗಾಗಿ ಈಗಿನ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.