ಆಂಧ್ರಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಪಿ.ವಿ.ಎನ್. ಮಾಧವ್ ಅವರು ಸಚಿವ ನಾರಾ ಲೋಕೇಶ್ ಅವರಿಗೆ ಭಾರತ ಸಾಂಸ್ಕೃತಿಕ ವೈಭವ (ಭಾರತೀಯ ಸಂಸ್ಕೃತಿಯ ವೈಭವ) ಎಂಬ ಶೀರ್ಷಿಕೆಯ ನಕ್ಷೆಯನ್ನು ನೀಡುತ್ತಿರುವುದು.
ಕೆಟಿಆರ್ ಎಕ್ಸ್ ಖಾತೆಯ ಚಿತ್ರ
ಹೈದರಾಬಾದ್: ಆಂಧ್ರಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಪಿ.ವಿ.ಎನ್. ಮಾಧವ್ ಅವರು ಸಚಿವ ನಾರಾ ಲೋಕೇಶ್ ಅವರಿಗೆ ಭಾರತ ಸಾಂಸ್ಕೃತಿಕ ವೈಭವ (ಭಾರತೀಯ ಸಂಸ್ಕೃತಿಯ ವೈಭವ) ಎಂಬ ಶೀರ್ಷಿಕೆಯ ನಕ್ಷೆಯನ್ನು ನೀಡಿದ್ದು, ಅದರಲ್ಲಿ ತೆಲಂಗಾಣ ಕಾಣಿಸುತ್ತಿಲ್ಲ ಎಂದು ಬಿಆರ್ಎಸ್ ಗುರುವಾರ ತೀವ್ರವಾಗಿ ಆಕ್ಷೇಪಿಸಿದೆ.
ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಈ ಕುರಿತಂತೆ 'ಎಕ್ಸ್' ಪೋಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದು, ಈ ಲೋಪವು ಬಿಜೆಪಿಯ ರಾಜಕೀಯ ಕಾರ್ಯಸೂಚಿಯೇ ಅಥವಾ ಮುಂದಿನ ಯೋಜನೆಯನ್ನು ಪ್ರತಿಬಿಂಬಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.
ತೆಲಂಗಾಣಕ್ಕೆ ಸಾಂಸ್ಕೃತಿಕ ಗುರುತು, ಸೂಕ್ತ ಸ್ಥಾನ ಮತ್ತು ಭೌಗೋಳಿಕ ಮಾನ್ಯತೆಗಾಗಿ ಇಲ್ಲಿನ ಜನರು ತಲೆಮಾರುಗಳಿಂದ ಹೋರಾಟ ನಡೆಸಿದ್ದಾರೆ ಎಂದು ರಾವ್ ಹೇಳಿದ್ದಾರೆ.
ಆದರೆ, ಈ ನಕ್ಷೆಯು ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಬೇರ್ಪಡಿಸುವ ತೆಳುವಾದ ರೇಖೆಯನ್ನು ಹೊಂದಿರುವ ಕಲಾತ್ಮಕ ಚಿತ್ರವಾಗಿದೆ ಎಂದು ಮಾಧವ್ ಪಿಟಿಐಗೆ ತಿಳಿಸಿದ್ದಾರೆ.
ಇಂದು ನಿಮ್ಮ ಆಂಧ್ರಪ್ರದೇಶದ ಬಿಜೆಪಿ ಘಟಕದ ಅಧ್ಯಕ್ಷ ಮಾಧವ್ ಅವರು, ತೆಲಂಗಾಣದ ಅಸ್ತಿತ್ವವನ್ನು ನಿರ್ಲಕ್ಷಿಸಿ, ಅಖಂಡ ಆಂಧ್ರಪ್ರದೇಶದ ನಕ್ಷೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ನಮ್ಮ ಹೋರಾಟವನ್ನು ಕಡೆಗಣನೆ ಮಾಡಿದ್ದಾರೆ ಎಂದು ರಾವ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ತೆಲಂಗಾಣದ ಜನರು ನಮ್ಮ ರಾಜ್ಯ, ನಮ್ಮ ಹೋರಾಟ ಮತ್ತು ನಮ್ಮ ಹುತಾತ್ಮರ ತ್ಯಾಗ ಮತ್ತು ಇತಿಹಾಸವನ್ನು ಕ್ಷುಲ್ಲಕವಾಗಿ ಕಂಡಿರುವುದನ್ನು ಬಿಂಬಿಸುತ್ತದೆ. ಲೋಪದ ಬಗ್ಗೆ ಬಿಜೆಪಿ ನಾಯಕತ್ವವು ತೆಲಂಗಾಣದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಂಧ್ರ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧವ್ ಬುಧವಾರ ವಿಜಯವಾಡದಲ್ಲಿ ನಾರಾ ಲೋಕೇಶ್ ಅವರನ್ನು ಭೇಟಿ ಮಾಡಿ ಭಾರತದ ನಕ್ಷೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.