ADVERTISEMENT

3 ಲಕ್ಷ  ನೌಕರರನ್ನು ಕೈ ಬಿಡಲು ಭಾರತೀಯ ರೈಲ್ವೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 11:38 IST
Last Updated 30 ಜುಲೈ 2019, 11:38 IST
   

ನವದೆಹಲಿ: ರೈಲ್ವೆಯ ದಕ್ಷತೆ ಹೆಚ್ಚಿಸಲು ಮತ್ತು ಖರ್ಚು ಕಡಿಮೆ ಮಾಡುವ ಸಲುವಾಗಿ ಮುಂದಿನ 1 ವರ್ಷದಲ್ಲಿ 3 ಲಕ್ಷ ನೌಕರರನ್ನುಕೈ ಬಿಡಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ. ಈಗ ಭಾರತೀಯ ರೈಲ್ವೆಯಲ್ಲಿ 13 ಲಕ್ಷ ನೌಕರರಿದ್ದು, ನೌಕರರಸಂಖ್ಯೆಯನ್ನು 10 ಲಕ್ಷಕ್ಕೆ ಇಳಿಸಲು ಚಿಂತನೆ ನಡೆಯುತ್ತಿದೆ.

ರೈಲ್ವೆ ಮೂಲಗಳ ಪ್ರಕಾರ ರೈಲ್ವೆ ಮಂಡಳಿಯು ಎಲ್ಲ ವಲಯಗಳಿಗೂ ಪತ್ರ ಬರೆದಿದ್ದು, ಸಾಮರ್ಥ್ಯವಿಲ್ಲದ ನೌಕರರನ್ನುಪತ್ತೆ ಹಚ್ಚಿ ಅವರು ಸ್ವಪ್ರೇರಿತ ನಿವೃತ್ತಿ ಪಡೆಯುವಂತೆ ಕೇಳಿಕೊಳ್ಳಬೇಕು ಎಂದು ಹೇಳಿದೆ.ಜುಲೈ 27ರಂದು ರೈಲ್ವೆ ಮಂಡಳಿ ಈ ಪತ್ರ ಬರೆದಿದ್ದು, ಉದ್ಯೋಗಿಗಳ ಸಾಮರ್ಥ್ಯದ ಬಗ್ಗೆ ಆಗಸ್ಟ್ 9ರೊಳಗೆ ವರದಿ ನೀಡಬೇಕು ಎಂದಿದೆ.

2020ರ ವೇಳೆಗೆ ರೈಲ್ವೆ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ ಮತ್ತು 55 ವರ್ಷಕ್ಕಿಂತ ಹಿರಿಯ ಉದ್ಯೋಗಿಗಳು ಸ್ವಪ್ರೇರಿತ ನಿವೃತ್ತಿ ಪಡೆಯುವಂತೆ ಹೇಳಲಾಗುವುದು. ಇದೀಗ ರೈಲ್ವೆ, ಸುರಕ್ಷೆ ಮತ್ತು ನಿರ್ವಹಣೆ ವಿಭಾಗಕ್ಕಾಗಿ 1.5 ಲಕ್ಷ ನೌಕರರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿದೆ.

ADVERTISEMENT

ಭಾರತೀಯ ರೈಲ್ವೆಯಲ್ಲಿ ಲಾಭವನ್ನುಂಟು ಮಾಡಲು ನೌಕರರನ್ನು ಕಡಿತಗೊಳಿಸಿ ತಂತ್ರಜ್ಞಾನವನ್ನು ಅಪ್ಪಿಕೊಳ್ಳಬೇಕಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ಸರ್ಕಾರ ರೈಲ್ವೆಯಲಾಭದ ಲೆಕ್ಕಾಚಾರ ಬಗ್ಗೆ ಅಧ್ಯಯನ ನಡೆಸಲಿದ್ದು, ಭ್ರಷ್ಟ ಮತ್ತು ಅಸಮರ್ಥ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದರು.

ಕಳೆದ ಕೆಲವು ವರ್ಷಗಳಿಂದ ಭಾರತೀಯ ರೈಲ್ವೆ ಕಳಪೆ ನಿರ್ವಹಣೆಯಿಂದಬಳಲುತ್ತಿದೆ.ಕಳೆದ ಬಾರಿಮೋದಿ ಸರ್ಕಾರದ ಅವಧಿಯ ಕೊನೆಯ ಮೂರು ವರ್ಷಗಳಲ್ಲಿ ನಿರ್ವಹಣೆಯ ಪ್ರಮಾಣ ಶೇ.95ಕ್ಕಿಂತ ಮೇಲಿತ್ತು.2017-18ರ ಅವಧಿಯಲ್ಲಿ ಇದು ಶೇ.98.4ಕ್ಕೇರಿತ್ತು.

ಆದಾಯ ಮತ್ತು ನಿರ್ವಹಣೆಯ ಖರ್ಚನ್ನು ಆಧರಿಸಿ ನಿರ್ವಹಣೆಯ ಪ್ರಮಾಣ ನಿರ್ಧರಿಸಲಾಗುತ್ತದೆ. ನಿರ್ವಹಣೆ ಪ್ರಮಾಣ ಜಾಸ್ತಿಯಾದರೆ ಸಂಸ್ಥೆಯ ಲಾಭದ ಸಾಮರ್ಥ್ಯವನ್ನು ಇದು ತೋರಿಸುತ್ತದೆ.
ಕಳೆದ ಕೆಲವು ವರ್ಷಗಳಿಂದ ಭಾರತೀಯ ರೈಲ್ವೆಯ ಆದಾಯವೂ ಹೆಚ್ಚಿದೆ.ನೌಕರರ ಖರ್ಚು ಮತ್ತು ಪಿಂಚಣಿಗಾಗಿ ರೈಲ್ವೆಯ ಖರ್ಚಿನ ಶೇ. 66ರಷ್ಟು ನೀಡಲಾಗುತ್ತದೆ.ಇಲ್ಲಿನ ನೌಕರರ ಖರ್ಚು ವೆಚ್ಚಗಳು ಅಧಿಕವಾಗಿದ್ದು, ಪ್ರತೀ ಬಾರಿ ವೇತನ ಆಯೋಗದ ಪರಿಷ್ಕರಣೆಯೊಂದಿಗೆ ಇದು ಅಧಿಕವಾಗುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.