ನವದೆಹಲಿ:‘ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿ ವೊಡಾಫೋನ್ ಸಮೂಹದ ಪರವಾಗಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಭಾರತ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಂಗಪುರದ ಹಿರಿಯ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ಗೆ ನಿಗದಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ವೊಡಾಫೋನ್ ಕಂಪನಿಯು ₹ 22,100 ಕೋಟಿ ತೆರಿಗೆ ಮೊತ್ತ ಪಾವತಿಸಬೇಕು ಎಂದು ಭಾರತ ಸರ್ಕಾರ ಬೇಡಿಕೆ ಇಟ್ಟಿತ್ತು. ಇದನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯು ಸೆಪ್ಟೆಂಬರ್ 25ರಂದು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಭಾರತ ಸರ್ಕಾರವು ಸಿಂಗಪುರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಬ್ರಿಟಿಷ್ ಆಯಿಲ್ ಮತ್ತು ಕೈರ್ನ್ ಎನರ್ಜಿಗೆ 1.2 ಶತಕೋಟಿ ಡಾಲರ್ ಹಿಂತಿರುಗಿಸುವಂತೆ ದಿ ಹೇಗ್ನ ಮಧ್ಯಸ್ಥಿಕೆ ನ್ಯಾಯಮಂಡಳಿಯು ಭಾರತ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶವನ್ನೂ ಭಾರತ ಪ್ರಶ್ನಿಸಿದೆ.
‘ವಿವಿಧ ದೇಶಗಳ ಜೊತೆಗಿನ ಹೂಡಿಕೆ ಸಂರಕ್ಷಣಾ ಒಪ್ಪಂದಗಳಲ್ಲಿ ತೆರಿಗೆ ಅಂಶವು ಒಳಗೊಂಡಿರುವುದಿಲ್ಲ. ತೆರಿಗೆ ಕಾನೂನು ದೇಶದ ಸಾರ್ವಭೌಮ ಹಕ್ಕು ಎನ್ನುವುದನ್ನು ಸರ್ಕಾರ ನಂಬಿದೆ’ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.