
ಜೈಪುರ: ಇಂಡಿಗೊ ವಿಮಾನ ಸಂಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಲ್ಲಿನ ಪ್ರವಾಸೋದ್ಯಮದ ಮೇಲೆ ತೀವ್ರ ಪರಿಣಾಮಬೀರಿದ್ದು, ರಾಜಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದೆ.
ಈ ಬಿಕ್ಕಟ್ಟಿನಿಂದಾಗಿ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಹೋಟೆಲ್ಗಳು, ಪ್ರವಾಸ ಆಯೋಜಿಸುವ ಕಂಪನಿಗಳ ನಿರ್ವಾಹಕರ ಮೇಲೆ ಪರಿಣಾಮ ಬೀರಿದೆ ಎಂದು ಸ್ಥಳೀಯ ಟೂರ್ ಆಪರೇಟರ್ಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಚಳಿಗಾಲ ರಾಜಸ್ಥಾನದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಕಾಲ. ಎರಡು ತಿಂಗಳಿನಿಂದ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರುತ್ತದೆ. ಡಿಸೆಂಬರ್ 10 ರಿಂದ ಜನವರಿ 5 ರವರೆಗೆ ಇದು ಗರಿಷ್ಠ ಪ್ರಮಾಣಕ್ಕೆ ತಲುಪುತ್ತದೆ. ಈ ದಿನಗಳಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳೂ ಸೇರ್ಪಡೆಗೊಳ್ಳುತ್ತವೆ. ಈಗಿನ ’ಇಂಡಿಗೊ ಬಿಕ್ಕಟ್ಟು‘, ಈ ಎಲ್ಲ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ‘ ಎಂದು ಜೈಪುರದ ಟೂರ್ ಆಪರೇಟರ್ ಸಂಜಯ್ ಕೌಶಿಕ್ ವಿವರಿಸಿದರು.
’ವಿಮಾನ ರದ್ದಾದದರೆ ಪ್ರವಾಸಿಗರಿಗಷ್ಟೇ ನಷ್ಟವಲ್ಲ, ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕಾಗಿ ಹೋಟೆಲ್, ಸ್ಥಳೀಯ ಸಂಚಾರಕ್ಕಾಗಿ ಬಸ್ ಬುಕ್ ಮಾಡಿದ್ದನ್ನು ಪ್ರವಾಸಿಗರು ರದ್ದು ಮಾಡುತ್ತಿರುವುದಿಂದ ದೊಡ್ಡ ಹಿನ್ನಡೆಯಾಗಿದೆ‘ ಎಂದು ಅವರು ಹೇಳಿದರು.
’ಈ ಬಿಕ್ಕಟ್ಟು ಮುಂದುವರಿದರೆ, ನಮ್ಮ ಬುಕಿಂಗ್ ವ್ಯರ್ಥವಾಗುತ್ತದೆ ಎಂದು ಜನರು ಆತಂಕದಲ್ಲಿದ್ದಾರೆ. ಹೀಗಾಗಿ ಈಗಾಗಲೇ ಬುಕ್ ಮಾಡಿದ್ದವರು ರದ್ದಗೊಳಿಸುತ್ತಿದ್ದಾರೆ. ಇನ್ನೊಂದೆಡೆ ಹೊಸ ಬುಕಿಂಗ್ಗಳು ಸ್ಥಗಿತಗೊಳ್ಳುತ್ತಿವೆ. ಪ್ರವಾಸಕ್ಕೆ ಸೂಕ್ತವಾಗಿರುವ ಕಾಲದಲ್ಲಿ ಇಂಥ ಬೆಳವಣಿಗೆಗಳು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಕೊಡುತ್ತವೆ‘ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.