ಶ್ರೀನಗರ/ದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ 227 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಇಂಡಿಗೊ ವಿಮಾನವು ಬುಧವಾರ ಪ್ರತಿಕೂಲ ಹವಾಮಾನದಿಂದ ‘ಟರ್ಬ್ಯುಲೆನ್ಸ್’ಗೆ ಸಿಲುಕಿ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಅಲುಗಾಡಿದ ಪರಿಣಾಮ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು.
ಕೂಡಲೇ ಪೈಲಟ್ ಈ ಕುರಿತು ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ಪರಿಸ್ಥಿತಿಯ ವರದಿ ಮಾಡಿದರು. ಆ ಬಳಿಕ ವಿಮಾನವು ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಟರ್ಬ್ಯುಲೆನ್ಸ್’ಗೆ ಸಿಲುಕಿದಾಗ ವಿಮಾನದೊಳಗಿನ ಕ್ಷಣಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ವಿಮಾನ ಅಲುಗಾಡುತ್ತಿದ್ದಂತೆ ಭಯಭೀತರಾದ ಪ್ರಯಾಣಕರು ದೇವರಲ್ಲಿ ಪ್ರಾರ್ಥಿಸುತ್ತಿದ್ದ ದೃಶ್ಯಗಳು ವಿಡಿಯೊದಲ್ಲಿವೆ.
ವಿಮಾನದ ಮೂಗಿಗೆ ಹಾನಿಯಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ವಿಮಾನಯಾನ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
‘ದೆಹಲಿಯಿಂದ ಶ್ರೀನಗರಕ್ಕೆ ಚಲಿಸುತ್ತಿದ್ದ ಇಂಡಿಗೊ(6ಇ2142) ವಿಮಾನವು ಪ್ರತಿಕೂಲ ಹವಾಮಾನವನ್ನು (ಆಲಿಕಲ್ಲು ಮಳೆ) ಎದುರಿಸಿತು. ಈ ವೇಳೆ ಪೈಲಟ್ ಶ್ರೀನಗರ ವಿಮಾನ ನಿಲ್ದಾಣಕ್ಕೆ ತುರ್ತು ಪರಿಸ್ಥಿತಿಯ ವರದಿ ಮಾಡಿದ್ದಾರೆ. ಬಳಿಕ ವಿಮಾನವು ಸಂಜೆ 6.30 ಗಂಟೆಗೆ ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿದಿದೆ’ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
‘ಸಾವಿನ ಸಮೀಪ ಹೋದ ಅನುಭವ ನಮಗಾಯಿತು. ವಿಮಾನದ ಮೂಗು ಮತ್ತು ಬಲಭಾಗಕ್ಕೆ ಹಾನಿಯಾಗಿತ್ತು’ ಎಂದು ಪ್ರಯಾಣಿಕ ಓವೈಸ್ ಮಕ್ಬೂಲ್ ಹಕೀಂ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜಧಾನಿಯಿಂದ ಶ್ರೀನಗರಕ್ಕೆ ತೆರಳಿದ ತನ್ನ ವಿಮಾನವು ದಿಢರನೇ ಆಲಿಕಲ್ಲು ಮಳೆಯನ್ನು ಎದುರಿಸಿತು, ಆದರೆ ವಿಮಾನವು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿಯಲ್ಲಿ ಭಾರಿ ಮಳೆ: ದೆಹಲಿ– ಎನ್ಸಿಆರ್ ಪ್ರದೇಶದಲ್ಲಿ ಬುಧವಾರ ಸಂಜೆ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಗಾಳಿಯು ಗಂಟೆಗೆ 79 ಕಿ.ಮೀ ವೇಗದಲ್ಲಿ ಬೀಸಿದ್ದು, ಹಲವು ಮರಗಳು ಧರೆಗುರುಳಿವೆ. ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.