ನವದೆಹಲಿ:‘ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ವೈಮಾನಿಕ ದಾಳಿ ನಂತರ ಉಭಯ ರಾಷ್ಟ್ರಗಳ ನಡುವೆ ಉಂಟಾಗಿದ್ದ ಸಂಘರ್ಷ ಶಮನಗೊಳಿಸುವಲ್ಲಿ ಯುಎಇ ಪ್ರಮುಖ ಪಾತ್ರ ವಹಿಸಿತ್ತು’ ಎಂದು ಗಲ್ಫ್ ರಾಷ್ಟ್ರದ ರಾಯಭಾರಿ ಅಹ್ಮದ್ ಅಲ್ ಬನ್ನಾ ಸೋಮವಾರ ಹೇಳಿದರು.
ಐಐಟಿ ದೆಹಲಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಜಿಕಲ್ ಸ್ಟ್ರೈಕ್ ನಂತರ ಉಭಯ ರಾಷ್ಟ್ರಗಳ ನಡುವೆ ತೀವ್ರ ಸಂಘರ್ಷ ಉಂಟಾಗಿತ್ತು. ಈ ವೇಳೆ, ಭಾರತದ ಪ್ರಧಾನಿ ನರೇಂದ್ರಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ಖಾನ್ ಅವರೊಂದಿಗೆ ಅಬುಧಾಬಿ ರಾಜಕುಮಾರ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ದೂರವಾಣಿ ಕರೆ ಮಾಡಿ ಸಂವಹನ ನಡೆಸಿದ್ದರು’ ಎಂದು ತಿಳಿಸಿದರು.
‘ಭಾರತ–ಪಾಕಿಸ್ತಾನದ ನಡುವೆ ಮಧ್ಯವರ್ತಿಯಾಗಿ ಯುಎಇ ಕಾರ್ಯನಿರ್ವಹಿಸಿಲ್ಲ. ಆದರೆ, ಸಂಘರ್ಷ ಶಮನಗೊಳಿಸುವಲ್ಲಿ ಮಾತ್ರ ಶ್ರಮಿಸಿದೆ’ ಎಂದು ಅವರು ಹೇಳಿದರು.
‘ಭಿನ್ನಾಭಿಪ್ರಾಯಗಳನ್ನು ಶಾಂತಿ ಮಾರ್ಗದಲ್ಲಿ ಬಗೆಹರಿಸಿಕೊಳ್ಳಬೇಕು ಎಂಬುದು ಯುಎಇ ಗುರಿ. ಇರಾನ್ನೊಂದಿಗೆ ನಾವು ಇದನ್ನು ಸಾಧಿಸಿ ತೋರಿಸಿದ್ದೇವೆ’ ಎಂದು ಬನ್ನಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.