
ಭಗೀರಥಪುರದಲ್ಲಿ ಇಂದೋರ್ ಮಹಾನಗರ ಪಾಲಿಕೆಯ ಕಾರ್ಮಿಕರು ಸ್ವಚ್ಛತಾ ಅಭಿಯಾನ ನಡೆಸಿದರು.
ಪಿಟಿಐ ಚಿತ್ರ
ಇಂದೋರ್: ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿರುವ ಘಟನೆಯನ್ನು ‘ವ್ಯವಸ್ಥೆ ಸೃಷ್ಟಿಸಿದ ವಿಪತ್ತು’ ಎಂದು ಬಣ್ಣಿಸಿರುವ ಜಲತಜ್ಞ ರಾಜೇಂದ್ರ ಸಿಂಗ್, ‘ಭ್ರಷ್ಟಾಚಾರವೇ ಈ ದುರ್ಘಟನೆಯ ಮೂಲ’ ಎಂದು ಆರೋಪಿಸಿದ್ದಾರೆ.
ಭಾನುವಾರ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ದೇಶದ ಅತ್ಯಂತ ಸ್ವಚ್ಚ ನಗರದಲ್ಲೇ ಇಂಥ ದುರಂತ ಸಂಭವಿಸಿದರೆ, ಉಳಿದ ನಗರಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯಸ್ಥೆಗಳ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಅಂದಾಜಿಸಬಹುದಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.
ಭಾಗೀರಥಿಪುರ ಪ್ರದೇಶದ ಪೊಲೀಸ್ ಹೊರ ಠಾಣೆ ಸಮೀಪದ ಮುಖ್ಯ ಕುಡಿಯುವ ನೀರು ಸರಬರಾಜು ಕೊಳವೆ ಪಕ್ಕದಲ್ಲೇ ಶೌಚಾಲಯ ನಿರ್ಮಿಸಲಾಗಿದ್ದು, ಅದರ ನೀರು ಕುಡಿಯುವ ನೀರಿನ ಕೊಳವೆಯಲ್ಲಿ ಸೇರಿ ಕಲುಷಿತಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
‘ಹಣ ಉಳಿಸಲು, ಗುತ್ತಿಗೆದಾರರು ಒಳಚರಂಡಿ ಮಾರ್ಗಗಳ ಬಳಿ ಕುಡಿಯುವ ನೀರಿನ ಪೈಪ್ಲೈನ್ಗಳನ್ನು ಅಳವಡಿಸುತ್ತಾರೆ. ಭ್ರಷ್ಟಾಚಾರ ಇಡೀ ವ್ಯವಸ್ಥೆಯನ್ನು ಹಾಳುಮಾಡಿದೆ. ಈ ಭ್ರಷ್ಟ ವ್ಯವಸ್ಥೆಯ ಪರಿಣಾಮವೇ ಇಂದೋರ್ ದುರಂತ’ ಎಂದು ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದೋರ್ನ ಭಾಗೀರಥಪುರ ಪ್ರದೇಶದಲ್ಲಿ ಡಿಸೆಂಬರ್ ಕೊನೆಯ ವಾರ ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದಾರೆಂದು ಸ್ಥಳೀಯ ಆಡಳಿತ ದೃಢಪಡಿಸಿದೆ. ಜನವರಿ 2ರಂದು ಮೇಯರ್ ಭಾರ್ಗವ ಅವರು, ಈ ಘಟನೆಯಿಂದ ಸಾಂಕ್ರಾಮಿಕ ರೋಗ ಹರಡಿ, 10 ರೋಗಿಗಳು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಘಟನೆಯಲ್ಲಿ 6 ತಿಂಗಳ ಮಗು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.