ರಾಯಪುರ : ‘ದೇಶ ಮತ್ತು ಬಡವರವಿರೋಧಿ ಶಕ್ತಿಗಳುದೇಶದಾದ್ಯಂತ ದ್ವೇಷ, ಹಿಂಸೆಯ ವಿಷ ಹರಡುತ್ತಿವೆ.ಸರ್ವಾಧಿಕಾರಿ ಧೋರಣೆ ಪ್ರಭಾವ ಪ್ರಜಾಪ್ರಭುತ್ವದಮೇಲೆ ಹೆಚ್ಚುತ್ತಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಟೀಕಿಸಿದ್ದಾರೆ.
ಸ್ವಾತಂತ್ರ್ಯದ ಬಂದ ಏಳ ದಶಕಗಳ ಬಳಿಕ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಈ ಪರಿಯ ಆತಂಕ ಎದುರಾದಿತುಎಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬಹುಶಃ ಚಿಂತಿಸಿರಲಾರರು. ಕೆಟ್ಟ ಚಿಂತನೆಗಳು ಈಗ ಪ್ರಾಬಲ್ಯ ಸಾಧಿಸುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳ ಅಸ್ತಿತ್ವಕ್ಕೇ ಧಕ್ಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅವರು ವಿಡಿಯೊ ಸಂವಾದದ ಮೂಲಕ ಛತ್ತೀಸಗಡ ವಿಧಾನಸಭೆಯ ನೂತನ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ದೇಶವನ್ನು ಹಳಿತಪ್ಪಿಸುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆದಿದೆ. ಪ್ರಜಾಪ್ರಭುತ್ವಕ್ಕೆ ಹೊಸ ಸವಾಲುಗಳು ಎದುರಾಗಿವೆ. ದೇಶ ಇಂದು ಕವಲುದಾರಿಯಲ್ಲಿದೆ. ಜನ ಪರಸ್ಪರ ದ್ವೇಷಿಸುವಂತ ಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಎರಡೇ ವರ್ಷದಲ್ಲಿ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿವೆ ಎಂದು ನೆನಪಿಸಿದ ಅವರು, ಭಾಷಣದಲ್ಲಿ ಯಾರ ಹೆಸರೂ ಉಲ್ಲೇಖಿಸಲಿಲ್ಲ. ‘ಅವರು ಜನರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ಅವರಿಗೇನು ಬೇಕು? ಅವರಿಗೆ ಜನರು, ಯುವಜನರು, ಮಹಿಳೆಯರು, ರೈತರು, ವ್ಯಾಪಾರಿಗಳು, ಯೋಧರು ಬಾಯಿ ಮುಚ್ಚಿಕೊಂಡಿರುವುದು ಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.