ADVERTISEMENT

ದೆಹಲಿ: ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ ವೇಳೆ ಇಬ್ಬರು ಕಾರ್ಮಿಕರು ಸಾವು

ಪಿಟಿಐ
Published 20 ಅಕ್ಟೋಬರ್ 2020, 3:53 IST
Last Updated 20 ಅಕ್ಟೋಬರ್ 2020, 3:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಾಯವ್ಯ ದೆಹಲಿಯ ಆಜಾದ್‌ಪುರ್ ಪ್ರದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ ವೇಳೆ ವಿಷ ವಾಯು ಉಸಿರಾಟದಿಂದಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ಸಂಜೆ 6.45ಕ್ಕೆ ಅಜಾದ್‌ಪುರ್‌ ಜಿ ಬ್ಲಾಕ್‌ನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ ಮೂವರು ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿತ್ತು ಎಂದಿದ್ದಾರೆ ಪೊಲೀಸರು.6.54ಕ್ಕೆ ನಮಗೆ ಮಾಹಿತಿ ಸಿಕ್ಕಿತ್ತು.ತಕ್ಷಣವೇ ನಾವು ಅಗ್ನಿಶಾಮಕದಳದ ವಾಹನ ಕಳುಹಿಸಿಕೊಟ್ಟಿದ್ದೇವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಬಡಾ ಬಾಗ್‌ನ ಜಿಡಿ ಕರ್ನಲ್ ರಸ್ತೆ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯನ್ನು ಹೊಂದಿರುವ ಕಂಪನಿಯೊಂದುಚಿನ್ನ ಮತ್ತು ಬೆಳ್ಳಿ ಸರ ತಯಾರಿಸುತ್ತದೆ. ಇದು ಆಭರಣಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳನ್ನು ಮತ್ತು ತೊಳೆಯಲು ಬಳಸುವ ನೀರನ್ನು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿಟ್ಟಿತ್ತು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಕಾರ್ಖಾನೆಯ ಮಾಲೀಕ ರಾಜೇಂದರ್ ಸೋನಿ ಅವರು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ಗುತ್ತಿಗೆ ಕಾರ್ಯವನ್ನು ನಜಾಫ್‌ಗಢದ ಗುತ್ತಿಗೆದಾರ ಪ್ರಮೋದ್ ದಂಗಿ ಅವರಿಗೆ ವಹಿಸಿದ್ದರು.

ಏಳು ಮಂದಿ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸಲು ಇಳಿದಿದ್ದು ಅದರಲ್ಲಿ ಮೂವರ ಪ್ರಜ್ಞೆ ತಪ್ಪಿತ್ತು.ಅವರನ್ನು ಬಿಜೆಆರ್‍ಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ತಲುಪಿದಾಗ ಇದರೀಸ್ (45) ಮತ್ತು ಸಲೀಂ (45) ಎಂಬ ಇಬ್ಬರು ಕಾರ್ಮಿಕರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಈ ಕಾರ್ಮಿಕರಿಬ್ಬರೂ ಉತ್ತರ ಪ್ರದೇಶದ ಖುರ್ಜಾದವರಾಗಿದ್ದಾರೆ ಎಂದು ಡಿಸಿಪಿ ವಿಜಯಾಂತ ಆರ್ಯ ಹೇಳಿದ್ದಾರೆ.

ಅವರ ಜತೆಗಿದ್ದ ಇತರ ಕಾರ್ಮಿಕರು ಅಬ್ದುಲ್ ಸದ್ದಾಂ (35), ಸಲೀಂ (35) ಮತ್ತು ಮನ್ಸೂರ್ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಇಸ್ಲಾಂ (40) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ .

ಕಾರ್ಖಾನೆಯ ಮಾಲೀಕ ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವಾಗ ಕಾರ್ಮಿಕರು ಸುರಕ್ಷಾ ಕವಚ ಧರಿಸಿಲ್ಲ. ಗುತ್ತಿಗೆದಾರ ಕಾರ್ಮಿಕರಿಗೆ400 ರೂಪಾಯಿಸಂಬಳ ನೀಡಿ ಈ ಕೆಲಸ ಮಾಡಿಸಿದ್ದರು ಎಂದಿದ್ದಾರೆ ಡಿಸಿಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.