ನವದೆಹಲಿ: ‘ದಬ್ಬಾಳಿಕೆ ವಿರೋಧಿಸುವ ಧೈರ್ಯ ಮತ್ತು ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಗುಣ ದೇಶದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ ಅವರು ಭಾರತೀಯರಿಗೆ ಬಿಟ್ಟುಹೋದ ಶ್ರೇಷ್ಠ ಪರಂಪರೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಬಣ್ಣಿಸಿದ್ದಾರೆ. ‘ನಾನು ಮುತ್ತಾತನಿಂದ ‘ಸತ್ಯ ಮತ್ತು ಧೈರ್ಯ’ವನ್ನು ಅನುವಂಶೀಯವಾಗಿ ಪಡೆದಿದ್ದೇನೆ’ ಎಂದಿದ್ದಾರೆ.
ಪಕ್ಷದ ನಾಯಕ ಸಂದೀಪ್ ದೀಕ್ಷಿತ್ ಅವರೊಂದಿಗೆ ರಾಹುಲ್ ಗಾಂಧಿ ‘ಮುಕ್ತ ಸಂವಾದ’ ನಡೆಸಿದ್ದರು. ‘ಸತ್ಯ ಮತ್ತು ಧೈರ್ಯ– ನೆಹರೂ ಅವರಿಂದ ನಾನು ಅನುವಂಶೀಯವಾಗಿ ಪಡೆದಿರುವೆ..?’ ಎಂಬ ಶೀರ್ಷಿಕೆಯ ವಿಡಿಯೊವನ್ನು‘ಎಕ್ಸ್’ ಮತ್ತು ಯೂಟ್ಯೂಬ್ ಚಾನಲ್ನಲ್ಲಿ ದೀಕ್ಷಿತ್ ಪೋಸ್ಟ್ ಮಾಡಿದ್ದಾರೆ.
‘ಭಯದ ಜೊತೆ ಗೆಳೆತನ ಮಾಡುವುದು ಹೇಗೆ ಎಂಬುದನ್ನು ಗಾಂಧೀಜಿ, ನೆಹರೂ, ಅಂಬೇಡ್ಕರ್, ಪಟೇಲ್ ಮತ್ತು ಬೋಸರು ನಮಗೆ ಕಲಿಸಿದ್ದರು. ಸಮಾಜವಾದ, ರಾಜಕೀಯವನ್ನಲ್ಲ. ಸತ್ಯ ಹೇಳುವ ಧೈರ್ಯ ತುಂಬಿದ್ದರು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
‘ಇಂದಿನ ಭಾರತದಲ್ಲಿ ಸತ್ಯವು ಅನುಕೂಲಕರವಲ್ಲ ಎಂಬ ಭಾವನೆ ಇದೆ. ಆದರೂ ಅದು ನನ್ನ ಆಯ್ಕೆ. ಏನೇ ಪರಿಣಾಮ ಎದುರಾದರೂ ಸತ್ಯದ ಜೊತೆ ನಿಲ್ಲುವೆ’ ಎಂದು ‘ಎಕ್ಸ್’ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
‘ನನ್ನ ತಾಯಿ ಈಗಲೂ ಉದ್ಯಾನದಲ್ಲಿ ಹಕ್ಕಿಗಳನ್ನು ನೋಡಿ ಆನಂದಿಸುತ್ತಾರೆ. ನಾನು ಜೂಡೋ ಆಡುತ್ತೇನೆ. ಸವಾಲು ಎದುರಿಸಲು ಇವು ನಮಗೆ ಮಾನಸಿಕ ಬಲ ತುಂಬುತ್ತವೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.