ನವದೆಹಲಿ: ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ಮೇಲೆ ಅತ್ಯಾಚಾರ ದೂರು ನೀಡಿದ್ದ ಯುವತಿ ಮೇಲೆ ನೀಲಿ ಶಾಹಿ ದಾಳಿ ನಡೆದಿದೆ. ದೆಹಲಿಯ ಕಾಲಿಂದಿ ಕುಂಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
23 ವರ್ಷದ ಸಂತ್ರಸ್ತೆ ಶನಿವಾರ ಆಕೆಯ ತಾಯಿಯ ಜೊತೆ ಯಾವುದೋ ಕೆಲಸದ ನಿಮಿತ್ತ ಜೈಪುರದಿಂದ ದೆಹಲಿಗೆ ಬಂದಿದ್ದರು. ಕಾಲಿಂದಿ ಕುಂಜ್ ರಸ್ತೆ ಸಮೀಪ ನಡೆದು ಹೋಗುತ್ತಿದ್ದಾಗ ರಿಕ್ಷಾದಿಂದ ಬಂದಿಳಿದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದ್ರವರೂಪದ ವಸ್ತುವನ್ನು ಯುವತಿ ಮೇಲೆ ಎರಚಲಾಗಿದ್ದು, ನೀಲಿ ಶಾಹಿ ಎಂಬುದು ಪ್ರಾಥಮಿಕ ಪರೀಕ್ಷೆಯಲ್ಲಿ ತಿಳಿದುಬಂದಿದೆ. ದಾಳಿಕೋರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಈಶಾ ಪಾಂಡೆ ಹೇಳಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿ ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವರ ಮಗನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹೇಶ್ ಜೋಶಿಯನ್ನು ಬಂಧಿಸಬೇಕು. ಸಂತ್ರಸ್ತೆಯ ಮೇಲೆ ಶಾಹಿ ದಾಳಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲಿವಾಲ್ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.