ನವದೆಹಲಿ:ಭಯೋತ್ಪಾದಕ ಕೃತ್ಯ ನಡೆಸಲು ಹೊಂಚು ಹಾಕಿದ್ದ ಐಎಸ್ನ ಹತ್ತು ಶಂಕಿತ ಉಗ್ರರನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್ಐಎ) ಶ್ಲಾಘಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಎಲೆಕ್ಟ್ರಾನಿಕ್ ಸಂಹವನ ಸಾಧನಗಳ ಮೇಲೆ ನಿಗಾ ಇಟ್ಟಿದ್ದಕ್ಕೆ ಇದು ಸಾಧ್ಯವಾಗಿದೆ ಎನ್ನುವ ಮೂಲಕ ಕಂಪ್ಯೂಟರ್ಗಳ ಮೇಲೆ ಕಣ್ಗಾವಲು ಇಡುವ ಕೇಂದ್ರ ಸರ್ಕಾರದ ನಿರ್ಧಾರವನ್ನೂ ಸಮರ್ಥಿಸಿಕೊಂಡಿದ್ದಾರೆ.
’ಭಯಾನಕ ಸಂಚು ರೂಪಿಸಿದ್ದ ಉಗ್ರರನ್ನು ಬಂಧಿಸುವ ಮೂಲಕ ಎನ್ಐಎ ಉತ್ತಮ ಕಾರ್ಯ ಮಾಡಿದೆ. ಎಲೆಕ್ಟ್ರಾನಿಕ್ ಸಂವಹನ ಸಾಧನಗಳ ಮೇಲೆ ಬೇಹುಗಾರಿಕೆ ನಡೆಸದಿದ್ದರೆ ಈ ಅಪಾಯಕಾರಿ ಸಂಚನ್ನು ಭೇದಿಸಲು ಸಾಧ್ಯವಿತ್ತೇ‘ ಎಂದು ಜೇಟ್ಲಿ ಗುರುವಾರ ಟ್ವೀಟ್ ಮಾಡಿದ್ದಾರೆ.
ದೆಹಲಿ ಹಾಗೂ ದೇಶದ ಉತ್ತರ ಭಾಗದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ಮತ್ತು ಸರಣಿ ಸ್ಫೋಟ ನಡೆಸಲು ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ಬುಧವಾರ ಐಎಸ್ನ ಹತ್ತು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.
ಬಂಧಿತ ಐಎಸ್ ಉಗ್ರರು ಎನ್ಐಎ ವಶಕ್ಕೆ: ಬಂಧಿತ ಐಎಸ್ ಶಂಕಿತ ಉಗ್ರರನ್ನು 12 ದಿನಗಳವರೆಗೆ ಹೆಚ್ಚಿನ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಶಕ್ಕೆ ನೀಡಿ ಗುರುವಾರ ದೆಹಲಿ ಕೋರ್ಟ್ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.