
ಬಂಧನ
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ದೀಪಾವಳಿ ಸಮಯದಲ್ಲಿ ಸಾರ್ವಜನಿಕ ಉದ್ಯಾನ, ದಕ್ಷಿಣ ದೆಹಲಿಯ ಮಾಲ್ ಸೇರಿ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎನ್ನುವ ಆರೋಪದಲ್ಲಿ ಐಸಿಸ್ನ ಇಬ್ಬರು ಶಂಕಿತ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಇಬ್ಬರ ಹೆಸರೂ ಅದ್ನಾನ್ ಆಗಿದ್ದು, ಈ ಪೈಕಿ ಒಬ್ಬ ದೆಹಲಿಯ ಸಾದಿಕ್ ನಗರ ಹಾಗೂ ಮತ್ತೊರ್ವ ಮಧ್ಯಪ್ರದೇಶದ ಭೋಪಾಲ್ ನಿವಾಸಿ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಇವರಿಬ್ಬರ ಬಂಧನದಿಂದಾಗಿ ದೆಹಲಿಯಲ್ಲಿ ನಡೆಯಬಹುದಾಗಿದ್ದ ದಾಳಿ ತಪ್ಪಿದೆ’ ಎಂದು ಅವರು ಹೇಳಿದ್ದಾರೆ.
ಐಸಿಸ್ ನಿಷ್ಠೆಯ ಪ್ರತಿಜ್ಞೆ ಮಾಡುವ ವಿಡಿಯೊ ಹಾಗೂ ದೆಹಲಿಯಲ್ಲಿ ಬಾಂಬ್ ಸ್ಫೋಟ ನಡೆಸಲು ಉದ್ದೇಶಿಸಿದ್ದ ಸ್ಥಳದ ಚಿತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಬಾಂಬ್ ಸ್ಫೋಟದ ಟೈಮರ್ ಇಡಲು ತಂದಿದ್ದ ವಾಚು, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಖರೀದಿ ಮಾಡಬೇಕಾದ ಸ್ಥಳಗಳ ಚಿತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ) ಪ್ರಮೋದ್ ಕುಶ್ವಾಹ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ದಕ್ಷಿಣ ದೆಹಲಿಯಲ್ಲಿರುವ ಮಾಲ್, ಸಾರ್ವಜನಿಕ ಉದ್ಯಾನ ಸೇರಿದಂತೆ ಅವರು ದಾಳಿ ಮಾಡಲು ಉದ್ದೇಶಿಸಿದ್ದ ಸ್ಥಳದ ಪರಿಶೀಲನೆಯನ್ನೂ ಅವರು ಮಾಡಿದ್ದರು. ಓರ್ವ ಅದ್ನಾನ್ನನ್ನು ಸೆಪ್ಟೆಂಬರ್ 16ರಂದು ದೆಹಲಿಯ ಸಾದಿಕ್ ನಗರದಲ್ಲಿ ಬಂಧಿಸಲಾಗಿತ್ತು. ಬಳಿಕ ಮತ್ತೊಬ್ಬನನ್ನು ಭೋಪಾಲ್ನಲ್ಲಿ ದಸ್ತಗಿರಿ ಮಾಡಲಾಗಿತ್ತು.
ಗ್ಯಾನ್ವ್ಯಾಪಿ ಮಸೀದಿ ಸಮೀಕ್ಷೆ ವೇಳೆ ಭಾರತದ ಪುರಾತತ್ವ ಇಲಾಖೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಭೋಪಾಲ್ ನಿವಾಸಿ ಅದ್ನಾನ್ನನ್ನು ಈ ಹಿಂದೆ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.
ಬಂಧಿತರಿಗೆ ಐಸಿಸ್ ನಂಟು ಹೊಂದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ದೆಹಲಿಯಲ್ಲಿ ಭಾರಿ ಪ್ರಮಾಣದ ದಾಳಿಗೆ ಅವರು ಯೋಜನೆ ಹಾಕಿದ್ದರು. ಎಲೆಕ್ಟ್ರಾನಿಕ್ ಸಾಧನ ಸೇರಿ ಅವರ ವಶದಲ್ಲಿದ್ದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಅವರ ನಂಟು ಹಾಗೂ ಇತರ ಯೋಜನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.