ನವದೆಹಲಿ: ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಮೌಲ್ಯಯುತ ಚಿಂತನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಸಮಷ್ಟಿ ಯತ್ನ ಅಗತ್ಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಹುತಾತ್ಮರ ದಿನದ ನಿಮಿತ್ತ ಅವರು ಭಾನುವಾರ ರಾಜಘಾಟ್ನಲ್ಲಿ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಗಾಂಧೀಜಿ ಅವರು 1948ರ ಜನವರಿ 30ರಂದು ನಾಥೂರಾಂ ಗೋಡ್ಸೆ ಅವರ ಗುಂಡೇಟಿನಿಂದ ಮೃತಪಟ್ಟಿದ್ದರು.
‘ಹುತಾತ್ಮರ ದಿನದಂದು ಬಾಪು ಅವರನ್ನು ಸ್ಮರಿಸಲಾಗುತ್ತಿದೆ. ಅವರ ಚಿಂತನೆಗಳನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ. ಅವರು ಧೈರ್ಯದಿಂದ ದೇಶ ರಕ್ಷಿಸಿದ್ದಾರೆ. ಅವರ ಸೇವೆ, ಸ್ಥೈರ್ಯ ಎಂದಿಗೂ ಸ್ಮರಣೀಯ’ ಎಂದೂ ಮೋದಿ ಟ್ವೀಟ್ ಮಾಡಿದ್ದಾರೆ.
ಗಾಂಧೀಜಿ ಉಬ್ಬುಚಿತ್ರ ಅನಾವರಣ: ‘ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಎಂಬುದು ಗಾಂಧೀಜಿ ಆರಂಭಿಸಿದ್ದ ಸ್ವದೇಶಿ ಆಂದೋಲನದ ಹೊಸ ವ್ಯಾಖ್ಯಾನಗಳಾಗಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
‘ಸ್ವಾತಂತ್ರ್ಯದ ನಂತರ ದೇಶ ಮರುನಿರ್ಮಿಸಲು ಗಾಂಧೀಜಿ ಹಮ್ಮಿಕೊಂಡಿದ್ದ ಸ್ವದೇಶಿ ಆಂದೋಲನವನ್ನು ಹಲವು ವರ್ಷ ಮರೆಯಾಗಿತ್ತು. ಪ್ರಧಾನಿ ಈಗ ಅವುಗಳಿಗೆ ಮರುಜೀವ ನೀಡಿದ್ದಾರೆ’ ಎಂದು ಹೇಳಿದರು.
ಗಾಂಧೀಜಿ ಪುಣ್ಯಸ್ಮರಣೆಯಂದು ಅಹಮದಾಬಾದ್ನಲ್ಲಿ ಅವರ ಉಬ್ಬುಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈ ಉಬ್ಬಚಿತ್ರವನ್ನು ಸ್ಥಾಪಿಸಿದೆ.
100 ಚದರ ಮೀಟರ್ನ ಅಲ್ಯುಮೀನಿಯಂ ಪ್ಲೇಟ್ನಲ್ಲಿ 2,975 ಕ್ಲೇಪಾಟ್ ಬಳಸಿ ಉಬ್ಬುಚಿತ್ರ ರೂಪಿಸಲಾಗಿದೆ. ಗಾಂಧೀಜಿ ಕೇವಲ ಭಾರತ ಸ್ವಾತಂತ್ರ್ಯಕ್ಕಷ್ಟೇ ಹೋರಾಡಲಿಲ್ಲ. ದೇಶದ ಮರುನಿರ್ಮಾಣಕ್ಕಾಗಿ ಹಲವು ಮಾರ್ಗ ನೀಡಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.