ADVERTISEMENT

ರಾಮಮಂದಿರ ಕುರಿತು ಐಯುಎಂಎಲ್ ಅಧ್ಯಕ್ಷರ ಹೇಳಿಕೆ: ವಿವಾದ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 15:42 IST
Last Updated 4 ಫೆಬ್ರುವರಿ 2024, 15:42 IST
<div class="paragraphs"><p>ಅಯೋಧ್ಯೆಯ ರಾಮಮಂದಿರ</p></div>

ಅಯೋಧ್ಯೆಯ ರಾಮಮಂದಿರ

   

ಪಿಟಿಐ ಚಿತ್ರ 

ಮಲಪ್ಪುರ: ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್‌ ಅಲಿ ಶಿಹಾಬ್ ತಂಗಳ್ ಅವರು ಅಯೋಧ್ಯೆ ರಾಮಮಂದಿರ ಕುರಿತು ನೀಡಿದ ಹೇಳಿಕೆ ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿದೆ.

ADVERTISEMENT

‘ದೇಶದಲ್ಲಿ ಬಹುಸಂಖ್ಯಾತರ ಕನಸು ಆಗಿದ್ದ ರಾಮಮಂದಿರ ನಿರ್ಮಾಣ ಆಗಿದೆ. ಈ ವಾಸ್ತವವನ್ನು ಒಪ್ಪಿಕೊಳ್ಳಬೇಕೇ ಹೊರತು, ಅದರ ವಿರುದ್ಧ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ಆಧಾರದಲ್ಲಿ ಮಂದಿರ ನಿರ್ಮಾಣ ಆಗಿದೆ. ರಾಮಮಂದಿರ ಮತ್ತು ಮುಂದೆ ನಿರ್ಮಾಣಗೊಳ್ಳಲಿರುವ ಬಾಬರಿ ಮಸೀದಿಯು ಭಾರತದಲ್ಲಿ ಜಾತ್ಯತೀತತೆಯನ್ನು ಬಲಪಡಿಸುವ ಎರಡು ಅತ್ಯುತ್ತಮ ಉದಾಹರಣೆ ಆಗಿವೆ’ ಎಂದು ಶಿಹಾಬ್‌ ತಂಗಳ್‌ ಹೇಳಿದ್ದರು. 

ಜನವರಿ 24ರಂದು ಮಂಜೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಡಿದ್ದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವರ ಹೇಳಿಕೆಯನ್ನು ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿಕೂಟದ ಐಎನ್‌ಎಲ್‌ ಟೀಕಿಸಿದೆ.

‘ಗಾಂಧೀಜಿ ಕಂಡಿದ್ದ ರಾಮರಾಜ್ಯವು ಆರ್‌ಎಸ್‌ಎಸ್‌ನ ರಾಮರಾಜ್ಯಕ್ಕಿಂತ ಭಿನ್ನವಾಗಿದೆ. ಇದು ರಾಜಕೀಯ ನಾಯಕರಿಗೆ ಗೊತ್ತಿಲ್ಲದೇ ಇರುವ ವಿಚಾರವಲ್ಲ. ಐಯುಎಂಎಲ್‌ನ ಸಾಮಾನ್ಯ ಕಾರ್ಯಕರ್ತರು ಈ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಐಎನ್‌ಎಲ್‌ನ ಮುಖಂಡ ಎನ್‌.ಕೆ.ಅಬ್ದುಲ್‌ ಅಜೀಜ್‌ ಹೇಳಿದ್ದಾರೆ.

ಆದರೆ ವಿರೋಧ ಪಕ್ಷದ ನಾಯಕ ಯುಡಿಎಫ್‌ನ ವಿ.ಡಿ.ಸತೀಶನ್‌ ಮತ್ತು ಐಯುಎಂಎಲ್‌ನ ಮುಖಂಡ ಪಿ.ಕೆ.ಕುಞಾಲಿಕ್ಕುಟ್ಟಿ ಅವರು ಶಿಹಾಬ್‌ ತಂಗಳ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಬಿಜೆಪಿಯು ಅಯೋಧ್ಯೆ ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಹೆಣೆದಿರುವ ಮೋಸದ ಬಲೆಯಲ್ಲಿ ಬೀಳದಂತೆ ಅವರು ಜನರನ್ನು ಎಚ್ಚರಿಸಿದ್ದಾರೆ’ ಎಂದು ಸತೀಶನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.