ಜಮ್ಮು (ಪಿಟಿಐ): ಭಯೋತ್ಪಾದಕ ಸಂಘಟನೆಗಳ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೆಬಲ್ ಸೇರಿದಂತೆ ಮೂವರು ಸರ್ಕಾರಿ ಸಿಬ್ಬಂದಿಯನ್ನು ಜಮ್ಮು–ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶನಿವಾರ ಸೇವೆಯಿಂದ ವಜಾ ಮಾಡಿದ್ದಾರೆ.
ಈಗಾಗಲೇ ಜೈಲಿನಲ್ಲಿರುವ ಪೊಲೀಸ್ ಕಾನ್ಸ್ಟೆಬಲ್ ಫಿರ್ದೋಸ್ ಅಹ್ಮದ್ ಭಟ್, ಶಿಕ್ಷಣ ಇಲಾಖೆಯ ಶಿಕ್ಷಕ ಅಶ್ರಫ್ ಭಟ್ ಮತ್ತು ಅರಣ್ಯ ಇಲಾಖೆಯ ಪರಿಚಾರಕ ನಿಸಾರ್ ಅಹ್ಮದ್ ಖಾನ್ ಸೇವೆಯಿಂದ ವಜಾಗೊಂಡ ಸಿಬ್ಬಂದಿ. 2000ನೇ ಇಸವಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಸಚಿವರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸಾರ್ ಬಂಧಿತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಮೂವರು ಸರ್ಕಾರಿ ನೌಕರರು ಭಯೋತ್ಪಾದಕ ನಂಟು ಹೊಂದಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಸಂವಿಧಾನದ ಅನುಚ್ಛೇದ 311(2)(ಸಿ)ಯನ್ನು ಅನ್ವಯಿಸಿ, ಲೆಫ್ಟಿನೆಂಟ್ ಗವರ್ನರ್ ಮೂವರನ್ನೂ ಸೇವೆಯಿಂದ ವಜಾ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಕೇಂದ್ರಾಡಳಿತ ಪ್ರದೇಶದ 70ಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿಯನ್ನು ಭಯೋತ್ಪಾಕ ನಂಟಿನ ಕಾರಣಕ್ಕೆ ವಜಾ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.