ಶ್ರೀನಗರ (ಪಿಟಿಐ): ಕಳೆದ ತಿಂಗಳು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದ ಹಿಜ್ಬುಲ್ ಮುಜಾಹಿದೀನ್ (ಎಚ್ಎಂ) ಉಗ್ರ ಸಂಘಟನೆಯ ಭಯೋತ್ಪಾದಕನಿಗೆ ಸೇರಿದ್ದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶನಿವಾರ ಮುಟ್ಟುಗೋಲು ಹಾಕಿಕೊಂಡಿತು ಎಂದು ಅಧಿಕಾರಿಗಳು ತಿಳಿಸಿದರು.
ಜಮ್ಮು ಕಾಶ್ಮೀರದ ಕುಪ್ವಾರದ ಬಾಬರ್ಪೋರಾದಲ್ಲಿ ಉಗ್ರನಿಗೆ ಸೇರಿದ ಆಸ್ತಿ ಇತ್ತು.
ಎಚ್ಎಂ ಸಂಘಟನೆಯ ಸ್ವಘೋಷಿತ ಕಮಾಂಡರ್ ಆಗಿದ್ದ ಬಶೀರ್ ಅಹ್ಮದ್ ಪೀರ್ನನ್ನು ಫೆಬ್ರುವರಿ 21ರಂದು ರಾವಲ್ಪಿಂಡಿಯಲ್ಲಿ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಎನ್ಐಎ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಬಶೀರ್ಗೆ ಸೇರಿದ್ದ 1.5 ಕನಲ್ (505.85 ಚದರ ಅಡಿ) ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಉಗ್ರರನ್ನು ರವಾನಿಸುವ ಕೆಲಸವನ್ನು ಬಶೀರ್ ಮಾಡುತ್ತಿದ್ದ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಆತನನ್ನು ‘ಉಗ್ರ’ ಎಂದು ಕೇಂದ್ರ ಸರ್ಕಾರವು 2022ರ ಅಕ್ಟೋಬರ್ನಲ್ಲಿ ಘೋಷಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.