ADVERTISEMENT

‘ಪ್ರಜಾ ವೇದಿಕೆ’ ನೆಲಸಮಕ್ಕೆ ಜಗನ್‌ ಆದೇಶ

ಗುರುವಾರವೇ ಕಾರ್ಯಾಚರಣೆ ಆರಂಭಿಸಿ; ಜಿಲ್ಲಾಧಿಕಾರಿಗಳ ಸಭೆಯಲ್ಲಿ ಜಗನ್‌ ಮೋಹನ್‌ ರೆಡ್ಡಿ ತಾಕೀತು

ಏಜೆನ್ಸೀಸ್
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ
ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ   

ಅಮರಾವತಿ: ‘ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಉಂದವಳ್ಳಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕ’ ಕಟ್ಟಡವನ್ನು ನೆಲಸಮಗೊಳಿಸಬೇಕು’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್‌ ರೆಡ್ಡಿ ಸೋಮವಾರ ಆದೇಶಿಸಿದರು.

ಪ್ರಜಾ ವೇದಿಕ ಕಟ್ಟಡದಲ್ಲಿಯೇ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಗುರುವಾರದಿಂದಲೇ ನೆಲಸಮ ಕಾರ್ಯ ಆರಂಭವಾಗಬೇಕು’ ಎಂದು ತಾಕೀತು ಮಾಡಿದರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು, ಇಲಾಖೆಗಳ ಮುಖ್ಯಸ್ಥರು, ಕಾರ್ಯದರ್ಶಿಗಳು ಹಾಗೂ ಸಂಪುಟ ಸಚಿವರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

‘ಉದ್ದೇಶಪೂರ್ವಕವಾಗಿ ನಾನು ಇದೇ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದೇನೆ. ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಹಿಂದಿನ ಸರ್ಕಾರವು ನದಿಪಾತ್ರದಲ್ಲಿ ಹೇಗೆ ನಿರ್ಮಾಣ ಚಟುವಟಿಕೆಯನ್ನು ಕೈಗೊಂಡಿತ್ತು ಎಂಬುದನ್ನು ನಿಮಗೆ ತೋರಿಸುವುದು ನನ್ನ ಉದ್ದೇಶ’ ಎಂದು ಮುಖ್ಯಮಂತ್ರಿ ಹೇಳಿದರು.

ADVERTISEMENT

‘ಕಟ್ಟಡದ ಅಡಿಪಾಯ ಜಲಮಟ್ಟಕ್ಕಿಂತ ಕೆಳಗಿದೆ ಎಂಬ ಕಾರಣಕ್ಕೆ ಅಧಿಕಾರಿಯೊಬ್ಬರು ನಿರ್ಮಾಣ ಕಾರ್ಯಕ್ಕೆ ಅನುಮತಿ ನಿರಾಕರಿಸಿದ್ದರು. ಆದರೆ, ನಾಯ್ಡು ನೇತೃತ್ವದ ಸರ್ಕಾರ ಈ ಆಕ್ಷೇಪವನ್ನು ಕಡೆಗಣಿಸಿತು. ಬರುವ ದಿನಗಳಲ್ಲಿ ನೆಲಸಮಗೊಳ್ಳಲಿರುವ ಮೊದಲ ಅಕ್ರಮ ಕಟ್ಟಡ ‘ಪ್ರಜಾ ವೇದಿಕೆ’ ಆಗಬೇಕು ಎಂಬುದು ನನ್ನ ಇಚ್ಛೆ’ ಎಂದರು.

ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ತೆಲುಗುದೇಶಂ ಪಕ್ಷಕ್ಕೆ ಸೇರಿದ ಎಲ್ಲ ವಸ್ತುಗಳನ್ನು ಪ್ರಜಾ ವೇದಿಕ ಕಟ್ಟಡದಿಂದ ತೆರವುಗೊಳಿಸುವ ಕಾರ್ಯಕ್ಕೆ ಸರ್ಕಾರ ಶನಿವಾರವಷ್ಟೇ ಚಾಲನೆ ನೀಡಿತ್ತು.

‘ಹಸಿರು ನ್ಯಾಯಮಂಡಳಿಯ ಸೂಚನೆಗಳನ್ನು ಕಡೆಗಣಿಸಿ ಕಟ್ಟಡ ನಿರ್ಮಿಸಿದ್ದು ತಪ್ಪು. ನಿರ್ಮಾಣ ವೆಚ್ಚವನ್ನು ಸಹ ₹ 5 ಕೋಟಿಯಿಂದ ₹8 ಕೋಟಿಗೆ ಏರಿಸಲಾಗಿದೆ. ಹೀಗಿರುವಾಗ ‘ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಬೇಡಿ’ ಎಂದುಜನರಿಗೆ ಹೇಳುವ ನೈತಿಕ ಹಕ್ಕು ನಮಗಿದೆಯೇ?’ ಎಂದು ಜಿಲ್ಲಾಧಿಕಾರಿಗಳಿಗೆ ಸಿ.ಎಂ. ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.