ADVERTISEMENT

ಕೆಸಿಆರ್‌ ಬೆಂಬಲ ಪಡೆದರೆ ತಪ್ಪೇನು: ಜಗನ್‌ ಪ್ರಶ್ನೆ

ನಾಯ್ಡು, ಪವನ್ ಕಲ್ಯಾಣ್‌ಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:29 IST
Last Updated 26 ಮಾರ್ಚ್ 2019, 19:29 IST
ಜಗನ್‌ಮೋಹನ್‌ ರೆಡ್ಡಿ
ಜಗನ್‌ಮೋಹನ್‌ ರೆಡ್ಡಿ   

ಹೈದರಾಬಾದ್‌: ‘ರಾಜ್ಯಕ್ಕೆ ವಿಶೇಷ ಸ್ಥಾನಮಾನ ಪಡೆಯುವ ಸಂಬಂಧ ರಾಜಕೀಯ ಒತ್ತಡ ಹೇರುವ ಸಲುವಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ಅವರ ಬೆಂಬಲ ಪಡೆದರೆ ತಪ್ಪೇನಿದೆ’ ಎಂದು ವೈಎಸ್ಆರ್‌ ಕಾಂಗ್ರೆಸ್‌ ಪಕ್ಷದ (ವೈಎಸ್ಆರ್‌ಸಿಪಿ) ಮುಖಂಡ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಪ್ರಶ್ನಿಸಿದ್ದಾರೆ.

ತಾಡಪತ್ರಿ ಪಟ್ಟಣದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಆಂಧ್ರಪ್ರದೇಶದಲ್ಲಿ 25 ಹಾಗೂ ತೆಲಂಗಾಣದಲ್ಲಿ 17 ಸೀಟುಗಳಿವೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಕೈಜೋಡಿಸಿದಲ್ಲಿ ನಮ್ಮ ಹಕ್ಕುಗಳಿಗಾಗಿ ಒಟ್ಟಾಗಿ ಹೋರಾಡಬಹುದು’ ಎಂದು ಹೇಳಿದರು.

‘ಟಿಡಿಪಿ ಬೆಂಬಲಿಸಿದರೆ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ವೈಎಸ್‌ಆರ್‌ಸಿಪಿ ಬೆದರಿಕೆ ಹಾಕುತ್ತಿದೆ’ ಎಂದು ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜನಸೇನಾ ಪಕ್ಷದ ನಾಯಕ, ನಟ ಪವನ್‌ ಕಲ್ಯಾಣ್ ಆರೋಪಿಸಿದ್ದಾರೆ.

ADVERTISEMENT

‘ವೈಎಸ್‌ಆರ್‌ಸಿಪಿ ಅಭ್ಯರ್ಥಿಗಳ ಆಯ್ಕೆಯನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸ ಪ್ರಗತಿಭವನದಲ್ಲಿ ಕೆ.ಚಂದ್ರಶೇಖರ್ ರಾವ್‌ ಅಂತಿಮಗೊಳಿಸಿದ್ದಾರೆ. ಟಿಡಿಪಿ ಬಗ್ಗೆ ಒಲವಿರುವವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ, ಅವರು ವೈಎಸ್‌ಆರ್‌ಸಿಪಿ ಸೇರುವಂತೆ ಮಾಡಲಾಗುತ್ತಿದೆ’ ಎಂಬ ಆರೋಪಗಳೂ ಕೇಳಿ ಬಂದಿವೆ. ಈ ಆರೋಪಗಳಿಗೆ ತಿರುಗೇಟು ಎಂಬಂತೆ ಜಗನ್‌ಮೋಹನ್‌ ರೆಡ್ಡಿ ಮೇಲಿನಂತೆ ಹೇಳಿದ್ದಾರೆ.

‘ಆಂಧ್ರಪ್ರದೇಶದಲ್ಲಿ ಚುನಾವಣೆ ಎದುರಿಸಲು ವೈಎಸ್‌ಆರ್‌ ಕಾಂಗ್ರೆಸ್‌ಗೆ ಕೆ.ಚಂದ್ರಶೇಖರ್‌ರಾವ್‌ ₹ 1,000 ಕೋಟಿ ಕಳುಹಿಸಿದ್ದಾರೆ’ ಎಂಬ ತೆಲುಗುದೇಶಂ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಆರೋಪಗಳಿಗೂ ತಿರುಗೇಟು ನೀಡಿರುವ ಜಗನ್‌ ಮೋಹನ್‌ರೆಡ್ಡಿ, ‘ಈ ರೀತಿ ಮಾತನಾಡುವುದು ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ಶೋಭಿಸದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.