ಮುಂಬೈ: ಜಗದೀಪ್ ಧನಕರ್ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ದೂರವಿರುವ ಬಗ್ಗೆ ಶಿವಸೇನಾ(ಉದ್ಧವ್ ಬಣ) ಸಂಸದ ಸಂಜಯ್ ರಾವುತ್ ಅವರು ಭಾನುವಾರ ಕಳವಳ ವ್ಯಕ್ತಪಡಿಸಿದರು.
‘ಚೀನಾ ಮತ್ತು ರಷ್ಯಾದಲ್ಲಿ ನಾಯಕರು ನಾಪತ್ತೆಯಾಗುವುದು ಸಾಮಾನ್ಯ ಸಂಗತಿ. ಆದರೆ ಕೆಲ ವ್ಯಕ್ತಿಗಳಿಂದ ಭಾರತದಲ್ಲೂ ಇಂತಹ ಬೆಳವಣಿಗೆಗಳು ಆರಂಭವಾಗಿವೆ’ ಎಂದು ಯಾರ ಹೆಸರನ್ನೂ ಹೇಳದೇ ಟೀಕಿಸಿದರು.
‘ಜುಲೈ 26ರಂದು ಸಂಜೆ 6 ಗಂಟೆಗೆ ರಾಜೀನಾಮೆ ನೀಡಿದ ಬಳಿಕ ಜಗದೀಪ್ ಧನಕರ್ ಅವರ ಬಗೆಗಿನ ಯಾವ ಮಾಹಿತಿಯೂ ಲಭ್ಯವಾಗುತ್ತಿಲ್ಲ. ಪ್ರಸ್ತುತ ಅವರು ಎಲ್ಲಿದ್ದಾರೆ? ಅವರ ಆರೋಗ್ಯ ಸ್ಥಿತಿ ಹೇಗಿದೆ? ಅವರು ಏನು ಮಾಡುತ್ತಿದ್ದಾರೆ? ನಿಜವಾಗಿಯೂ ಇದ್ದಾರಾ ಅಥವಾ ಕಣ್ಮರೆಯಾಗಿದ್ದಾರಾ? ಎಂಬೆಲ್ಲ ಅನುಮಾನಗಳು ಮೂಡುತ್ತಿವೆ’ ಎಂದು ರಾವುತ್ ಹೇಳಿದ್ದಾರೆ.
‘ಧನಕರ್ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ದೇಶದ ಮಾಜಿ ಉಪ ರಾಷ್ಟ್ರಪತಿಯೊಬ್ಬರು ಕಣ್ಮರೆಯಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳವಳಕಾರಿ ಸಂಗತಿ. ಭಾರತದಲ್ಲಿ ಈ ರೀತಿಯ ಪ್ರಕ್ರಿಯೆ ಆರಂಭವಾಗಿದ್ದರೆ, ರಾಹುಲ್ ಗಾಂಧಿ ಮತ್ತು ಅವರ ಆಪ್ತರು ಎಚ್ಚರಿಕೆಯಿಂದಿರಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.