ADVERTISEMENT

ಜೈಪುರ ಸಾಹಿತ್ಯೋತ್ಸವ: ಸುಧಾಮೂರ್ತಿ ಗೋಷ್ಠಿಗೆ ಕಿಕ್ಕಿರಿದ ಜನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 22:06 IST
Last Updated 20 ಜನವರಿ 2023, 22:06 IST
ಸುಧಾಮೂರ್ತಿ
ಸುಧಾಮೂರ್ತಿ   

ಜೈಪುರ: ‘ನಾಯಿ ಇರುವವರು ಅದೃಷ್ಟವಂತರು. ಹೆಣ್ಣುಮಕ್ಕಳು ಇರುವವರೂ ಪುಣ್ಯವಂತರು. ಪ್ರೀತಿ, ವಿಧೇಯತೆ ಕೊಡುವುದು ನಾಯಿಗಷ್ಟೆ ಸಾಧ್ಯ. ಮಗಳ ಮಾತನ್ನು ಕೇಳಿಸಿಕೊಂಡು ನಾನು ಸಮಾಜಸೇವೆ ಮಾಡಿದೆ’ ಎಂದು ಸಾಹಿತಿ ಸುಧಾಮೂರ್ತಿ ಶುಕ್ರವಾರ ಸಾಹಿತ್ಯೋತ್ಸವದ ಬೆಳಗಿನ ಗೋಷ್ಠಿಯಲ್ಲಿ ತಮ್ಮ ನಂಬಿಕೆ ಹಾಗೂ ಸಾಹಿತ್ಯದ ಕುರಿತು ಮಾತನಾಡಿದರು.

ತಮ್ಮನ್ನು ‘ನ್ಯಾಷನಲ್ ನಾನಿ’ ಎಂದು ಸುಧಾಮೂರ್ತಿ ಕರೆದುಕೊಂಡರು. ಆಗ ಗೋಷ್ಠಿ ನಿರ್ವಹಿಸಿದ ಮಂದಿರಾ ನಾಯರ್, ‘ನೀವು ಇಂಟರ್‌ನ್ಯಾಷನಲ್ ನಾನಿ’ ಎಂದದ್ದೇ, ಪ್ರೇಕ್ಷಕರಿಂದ ಚಪ್ಪಾಳೆ.

ತಾವು ಎಂಜಿನಿಯರಿಂಗ್ ಓದುವಾಗಲೇ ಸಾಧಿಸಿ ತೋರಿಸಿದ್ದನ್ನು ಅವರು ಸ್ಮರಿಸಿದರು. ಅರ್ಥಶಾಸ್ತ್ರಜ್ಞೆ ಅಲ್ಲದೇ ಇದ್ದರೂ ಬಂಡವಾಳ ಹೂಡಿಕೆಯಲ್ಲಿ ತಮ್ಮದೇ ಎತ್ತಿದ ಕೈ ಎಂದರು. ಇನ್ಫೊಸಿಸ್‌ ಬೆಳವಣಿಗೆಯನ್ನು ಅದಕ್ಕೆ ಉದಾಹರಣೆಯಾಗಿ ನೀಡಿದರು.

ADVERTISEMENT

ಐವತ್ತೆರಡನೇ ವಯಸ್ಸಿನಲ್ಲಿ ಇಂಗ್ಲಿಷ್‌ನಲ್ಲಿ ಬರೆಯಲು ಆರಂಭಿಸಿದ ಸಂದರ್ಭವನ್ನು ಸ್ಮರಿಸಿದ ಅವರು, ತಮ್ಮ ಬಾಲ್ಯದ ಘಟನೆಗಳನ್ನೂ ಮೆಲುಕುಹಾಕಿದರು. ತಾವು ಹೆಚ್ಚು ಉಪದೇಶ ಮಾಡುವ ಪೈಕಿ ಎಂದು ಗೇಲಿ ಕೂಡ ಮಾಡಿಕೊಂಡರು.

ಸುಧಾಮೂರ್ತಿ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ, ‘ನಾರಾಯಣ ಮೂರ್ತಿಯನ್ನು ಮದುವೆ ಆಗಿದ್ದರಿಂದ ಸುಧಾಮೂರ್ತಿಯಾದೆ’ ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಗೋಷ್ಠಿಗೆ ಕಿಕ್ಕಿರಿದು ಜನರು ಸೇರಿದ್ದರು.

ಕವಿ ಸಮಯ
ಶಬಾನಾ ತಂದೆ ಕೈಫಿ ಆಜ್ಮಿ ಹಾಗೂ ಜಾವೆದ್ ಅಖ್ತರ್‌ ತಂದೆ ಜಾನ್ ನಿಸಾರ್ ಅಖ್ತರ್ ಇಬ್ಬರೂ ಬರೆದ ಆಯ್ದ ಕವನಗಳನ್ನು ಸಾಹಿತ್ಯೋ ಕಾವ್ಯಸಂಬಂಧಿ ಗೋಷ್ಠಿಯಲ್ಲಿ ಪ್ರಸ್ತುತಪಡಿಸಲಾಯಿತು. ಕವನಗಳ ರಸಾನುಭವದ ಜತೆಗೆ ತಮ್ಮ ಬದುಕಿನ ಹಲವು ಸಂಗತಿಗಳನ್ನು ಶಬಾನಾ ಹಾಗೂ ಜಾವೆದ್ ಅಖ್ತರ್ ಮೆಲುಕುಹಾಕಿದರು. ಇನ್ನೊಂದು ಗೋಷ್ಠಿಯಲ್ಲಿ ತಮ್ಮ ‘ಟಾಕಿಂಗ್ ಲೈಫ್’ ಎಂಬ ಕೃತಿಯಲ್ಲಿನ ಸಾರವನ್ನೂ ಜಾವೆದ್ ಮೆಲುಕು ಹಾಕಿದರು. 25 ವರ್ಷ ಚಿತ್ರೋದ್ಯಮದಲ್ಲಿ ಸೈಕಲ್ ಹೊಡೆದ ನಂತರ ಸಿಕ್ಕ ಯಶಸ್ಸನ್ನು ನೆನಪಿಸಿಕೊಂಡರು. ನೂರು ರೂಪಾಯಿ ತಿಂಗಳ ಸಂಬಳಕ್ಕೆ ಕೆಲಸ ಮಾಡಿದ ಸಂದರ್ಭವನ್ನು ಚಿತ್ರಸಾಹಿತಿಯಿಂದ ಕೇಳಿದ ಪ್ರೇಕ್ಷಕರಿಂದ ಕರತಾಡನ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.