AI
ಜೈಪುರ, ರಾಜಸ್ಥಾನ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿದ್ದ ಇಬ್ಬರು ಕೈದಿಗಳು ಭಾರಿ ಭದ್ರತೆ ಇರುವ ಜೈಪುರದ ಕೇಂದ್ರ ಕಾರಾಗೃಹದಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ.
ಇಂದು (ಸೆ.20) ಬೆಳಗಿನ ಜಾವ ಈ ಘಟನೆ ನಡೆದಿದೆ ಎಂದು ಜೈಪುರ ಸಿಟಿ ಪೊಲೀಸರು ತಿಳಿಸಿದ್ದಾರೆ.
ಜೈಲಿನಿಂದ ಪರಾರಿಯಾದವರನ್ನು ನವಲ್ ಕಿಶೋರ್ ಮಹಾವರ್ ಹಾಗೂ ಅನಸ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಬ್ಬರು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ನವಲ್ ಕಿಶೋರ್ ಮಹಾವರ್ ಹಾಗೂ ಅನಸ್ ಕುಮಾರ್ ಹಲವು ದಿನಗಳಿಂದ ಸಂಚು ರೂಪಿಸಿ ಭದ್ರತೆಯಲ್ಲಿ ಇಡಲಾಗುತ್ತಿದ್ದ ರಬ್ಬರ್ ಪೈಪ್ (ನೀರು ಪೂರೈಸುವ ಪೈಪ್) ಅನ್ನು ಕದ್ದು, ಅದರಿಂದ ಜೈಲಿನ 27 ಅಡಿ ಎತ್ತರದ ಗೋಡೆ ಏರಿ ಬಳಿಕ ಅಲ್ಲಿಂದ ಹೈ ಟೆನ್ಷನ್ ವಯರ್ ತಾಗದಂತೆ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ಜೈಪುರ ಸಿಟಿ ಪೊಲೀಸ್ ಎಸಿಪಿ ನಾರಾಯಣ ಕುಮಾರ್ ತಿಳಿಸಿದ್ದಾರೆ.
ಭಾರಿ ಭದ್ರತೆಯಿದ್ದರೂ ಕೈದಿಗಳು ಹೇಗೆ ತಪ್ಪಿಸಿಕೊಂಡರು ಎಂಬುದು ಆಶ್ಚರ್ಯ ತರಿಸುತ್ತದೆ. ಒಳಗಿನ ಯಾರಾದರೂ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿರಬಹುದು. ಪ್ರಕರಣ ದಾಖಲಿಸಿಕೊಂಡು ಕೈದಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.