ನವದೆಹಲಿ: ಕೊರೊನೋತ್ತರ ಕಾಲದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾದ ಸಾಮರ್ಥ್ಯ ವೃದ್ಧಿಗೆ ಸಹಕರಿಸುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ವಿಶ್ವದ ವಿವಿಧ ಭಾಗದಲ್ಲಿರುವ ಭಾರತೀಯರಿಗೆ ಕರೆ ನೀಡಿದರು.
‘ಪ್ರವಾಸಿ ಭಾರತೀಯ ದಿವಸ್‘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೊರೊನಾ ಸಾಂಕ್ರಾಮಿಕದಿಂದಾಗಿ ಹಲವು ಕಡೆಗಳಲ್ಲಿ ಅನಿಶ್ಚತತೆ ವಾತಾವರಣ ಸೃಷ್ಟಿಯಾಗಿದೆ. ಇದು ಜಾಗತಿಕವಾಗಿ ಹಂಚಿ ಹೋಗಿರುವ ನಮ್ಮ ದೇಶದ ನಾಗರಿಕರೊಂದಿಗೆ ಪರಸ್ಪರ ಸಂಪರ್ಕ ಬೆಳೆಸುವ ಅನಿವಾರ್ಯತೆ ಸೃಷ್ಟಿಸಿದೆ‘ ಎಂದು ಹೇಳಿದರು.
ಆತ್ಮನಿರ್ಭರ ಭಾರತ‘ದ ಮೂಲಕ ಕೊರೊನೋತ್ತರ ಕಾಲದ ಸವಾಲುಗಳನ್ನು ಎದುರಿಸಲು ಭಾರತ ಸಜ್ಜಾಗಿದೆ ಎಂದು ಹೇಳಿದ ಜೈಶಂಕರ್, ಈ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ‘ಸಾಮರ್ಥ್ಯ‘ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ದ್ದೇವೆ. ಜತೆಗೆ ಜಾಗತಿಕವಾಗಿ ಕೊಡುಗೆ ನೀಡಲು ಮುಂದಾಗಿದ್ದೇವೆ. ವಿಶ್ವದ ಬೇರೆ ಬೇರೆ ಭಾಗಕ್ಕೆ ವಲಸೆ ಹೋಗಿರುವ ನಮ್ಮ ಭಾರತೀಯರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಆಹ್ವಾನಿಸುತ್ತಿದ್ದೇವೆ‘ ಎಂದರು.
‘ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ನೆೆಲೆಸಿರುವ ಭಾರತೀಯರು, ನಮ್ಮ ದೇಶದೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿದ್ದಾರೆ. ಈ ಅಂಶಗಳು ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರೋತ್ಸಾಹಿಸುತ್ತವೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.