ನವದೆಹಲಿ: ಜವಾಹರಲಾಲ್ ನೆಹರು ಸಂಪುಟದ ಕರಡು ಪಟ್ಟಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರಿತ್ತೆ? ಇದು ಗುರುವಾರ ಟ್ವಿಟರ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರ ನಡುವೆ ಭಾರಿ ಚರ್ಚೆಗೆ ಒಳಗಾದ ವಿಷಯವಾಗಿತ್ತು.
ವಿ.ಪಿ.ಮೆನನ್ ಕುರಿತು ನಾರಾಯಣಿ ಬಸು ಅವರು ಬರೆದ ಕೃತಿ ಬಿಡುಗಡೆಗೊಳಿಸಿದ ಬಳಿಕ ಟ್ವೀಟ್ ಮಾಡಿದ್ದ ಜೈಶಂಕರ್ ‘ಪಟೇಲ್ ಅವರು ತಮ್ಮ ಸಂಪುಟದಲ್ಲಿರುವುದು ನೆಹರು ಅವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಕರಡು ಪಟ್ಟಿಯಿಂದ ಅವರನ್ನು ಕೈಬಿಟ್ಟಿದ್ದರು ಎಂದು ಈ ಕೃತಿಯಿಂದ ತಿಳಿಯಿತು. ಐತಿಹಾಸಿಕ ವ್ಯಕ್ತಿಗೆ ಸಿಗಬೇಕಿದ್ದ ನ್ಯಾಯ ಈಗ ದೊರಕಿದೆ’ ಎಂದು ಹೇಳಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗುಹಾ, ‘ಇದು ಕಟ್ಟುಕಥೆ ಎನ್ನುವುದನ್ನು ಪ್ರೊ.ಶ್ರೀನಾಥ್ ರಾಘವ್ ಆಗಲೇ ಸಾಬೀತುಪಡಿಸಿದ್ದಾರೆ. ಸುಳ್ಳುಸುದ್ದಿ ಪ್ರಚಾರ ಮಾಡುವುದು ಹಾಗೂ ಆಧುನಿಕ ಭಾರತದ ನಿರ್ಮಾತೃಗಳ ನಡುವೆ ಶತ್ರುತ್ವ ಇತ್ತು ಎಂದು ಕಥೆ ಕಟ್ಟುವುದು ವಿದೇಶಾಂಗ ಸಚಿವರ ಕೆಲಸವಲ್ಲ. ಈ ಕೆಲಸವನ್ನು ಅವರು ಬಿಜೆಪಿಯ ಐ.ಟಿ ಘಟಕಕ್ಕೆ ಬಿಡಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.