ಶ್ರೀನಗರ: ಜಮ್ಮು–ಕಾಶ್ಮೀರ ಮೂಲಕ ಪ್ರಮುಖ ವಕೀಲ ಬಾಬರ್ ಕಾದರಿ ಅವರನ್ನು ಉಗ್ರಗಾಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಶ್ರೀನಗರದ ಹವಾಲ ಪ್ರದೇಶದಲ್ಲಿ ಗುರುವಾರ ಸಂಜೆ ಹತ್ಯೆ ನಡೆದಿದೆ.
ಬಾಬರ್ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಧ್ಯೆಯಲ್ಲೇ ಅವರು ಸಾವಿಗೀಡಾದರು ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಗುರುತು ಪತ್ತೆ ಮಾಡಲಾಗದ ಬಂದೂಕುಧಾರಿ ಬಾಬರ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಎಸ್ಕೆಐಎಂಎಸ್ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತು, ಆದರೆ ಅವರು ಸಾವಿಗೀಡಾಗಿರುವುದಾಗಿ ವೈದ್ಯರು ಘೋಷಿಸಿದರು.
'ಷಾಹ್ ನಾಜಿರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯದ ಪೊಲೀಸ್ ಆಡಳಿತದಲ್ಲಿ ಕೋರುತ್ತೇನೆ. ನಾನು ಏಜೆನ್ಸಿಗಳಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಈತ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾನೆ. ಈ ಅಸತ್ಯದ ಹೇಳಿಕೆಗಳು ನನ್ನ ಬದುಕಿಗೆ ಅಪಾಯ ಉಂಟು ಮಾಡಬಹುದಾಗಿದೆ' ಎಂದು ಇತ್ತೀಚೆಗಷ್ಟೇ ಬಾಬರ್ ಟ್ವೀಟ್ವೊಂದನ್ನು ಉದ್ದೇಶಿಸಿ ಪ್ರಕಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.