ಶ್ರೀನಗರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜಮ್ಮು ಮತ್ತು ಕಾಶ್ಮೀರವು ₹17 ಕೋಟಿ ದೇಣಿಗೆ ನೀಡಿದೆ.
‘ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನದ ಭಾಗವಾಗಿ ಜಮ್ಮು ಕಾಶ್ಮೀರವು ₹17 ಕೋಟಿ ದೇಣಿಗೆ ನೀಡಿದೆ’ ಎಂದು ಪ್ರಾಂತ ಸಹ ಸಂಘಚಾಲಕ ಗೌತಮ್ ಮೆಂಗಿ ತಿಳಿಸಿದ್ದಾರೆ.
‘ಸುಮಾರು 44 ದಿನಗಳ ಸುದೀರ್ಘ ಅಭಿಯಾನದಲ್ಲಿ 21,331 ಆರ್ಎಸ್ಎಸ್ ಕಾರ್ಯಕರ್ತರು ಕೇಂದ್ರಾಡಳಿತ ಪ್ರದೇಶದ 4693 ಹಳ್ಳಿಗಳು ಮತ್ತು ಪಟ್ಟಣಗಳಲ್ಲಿನ ಸುಮಾರು 6.37 ಲಕ್ಷ ಮನೆಗಳಿಗೆ ಭೇಟಿ ನೀಡಿ, ದೇಣಿಗೆ ಸಂಗ್ರಹಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಈ ರಾಮಮಂದಿರವೂ ಕೇವಲ ದೇವಾಲಯವಲ್ಲ. ಇದು ಭಾರತೀಯ ಸಂಸ್ಕೃತಿಯ ಭಾಗ. ಕೋವಿಡ್ ಸಂದರ್ಭದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಜಮ್ಮು ಮತ್ತು ಕಾಶ್ಮೀರದ 2,902 ಹಳ್ಳಿ ಮತ್ತು ಪಟ್ಟಣಗಳಿಗೆ 1.97 ಲಕ್ಷ ಆಹಾರ ಪೊಟ್ಟಣ, 4567 ಸ್ಯಾನಿಟೈಸರ್, 1.36 ಲಕ್ಷ ಮಾಸ್ಕ್, 58,716 ಪಡಿತರ ಕಿಟ್ ಮತ್ತು 510 ಪಿಪಿಇ ಕಿಟ್ ವಿತರಿಸಿದ್ದರು’ ಎಂದು ತಿಳಿಸಿದ್ದಾರೆ.
ಜನವರಿ 15 ರಂದು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನ ಪ್ರಾರಂಭಗೊಂಡು, ಫೆಬ್ರುವರಿ 27ರಂದು ಮುಕ್ತಾಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.