ADVERTISEMENT

ಜಮ್ಮು–ಕಾಶ್ಮೀರ: ಒಮರ್‌ ಬಂಧನ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 19:48 IST
Last Updated 15 ಜನವರಿ 2020, 19:48 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ: ಕಳೆದ ಆಗಸ್ಟ್‌ನಿಂದ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರನ್ನು ಶ್ರೀನಗರದ ಅವರ ಅಧಿಕೃತ ನಿವಾಸದ ಬಳಿಯಿರುವ ಬಂಗಲೆಗೆ ಸ್ಥಳಾಂತರಿಸಲಾಗುವುದು. ಈ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಮತ್ತೊಂದು ಬಂಗಲೆಗೆ ಸ್ಥಳಾಂತರಿಸಿದರೂ ಅವರು ಬಂಧನದಲ್ಲಿಯೇ ಇರುತ್ತಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫೆಬ್ರುವರಿಯಲ್ಲಿ ಭಾರತಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೇಂದ್ರ ಸಚಿವರ ನಿಯೋಗವೊಂದು ಸಹ ಕಾಶ್ಮೀರ ಕಣಿವೆಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಳೆದ ಆಗಸ್ಟ್‌ 5 ರಿಂದ ಒಮರ್‌ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಸಹ ಬಂಧನದಲ್ಲಿರಿಸಲಾಗಿದೆ.

ಒಮರ್‌ ಅವರು ರಾಜ್ಯದ ಅತಿಥಿಗೃಹ ಹರಿ ನಿವಾಸದಲ್ಲಿ ಬಂಧನದಲ್ಲಿದ್ದರು. ಅವರ ತಂದೆ ಫಾರೂಕ್‌ ಅಬ್ದುಲ್ಲಾ ಅವರು ತಮ್ಮ ನಿವಾಸದಲ್ಲಿಯೇ ಬಂಧನದಲ್ಲಿದ್ದಾರೆ. ಮೆಹಬೂಬಾ ಮುಫ್ತಿ ಅವರು ಅತಿಥಿಗೃಹದಲ್ಲಿಯೇ ಉಳಿಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.