ADVERTISEMENT

ಕಾಶ್ಮೀರಿ ಪಂಡಿತ ನೌಕರನ ಹತ್ಯೆ: ತನಿಖೆಗೆ ಎಸ್‌ಐಟಿ ರಚಿಸಲು ಸರ್ಕಾರದ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 14:52 IST
Last Updated 13 ಮೇ 2022, 14:52 IST
ಕಾಶ್ಮೀರಿ ಪಂಡಿತ ಸಮುದಾಯದ ರಾಹುಲ್‌ ಭಟ್‌ ಸಾವಿಗೆ ಚಿತ್ರದ ಮೂಲಕ ಸಂತಾಪ ಸೂಚಿಸಿದ ಚಿತ್ರಕಲಾ ವಿದ್ಯಾರ್ಥಿ
ಕಾಶ್ಮೀರಿ ಪಂಡಿತ ಸಮುದಾಯದ ರಾಹುಲ್‌ ಭಟ್‌ ಸಾವಿಗೆ ಚಿತ್ರದ ಮೂಲಕ ಸಂತಾಪ ಸೂಚಿಸಿದ ಚಿತ್ರಕಲಾ ವಿದ್ಯಾರ್ಥಿ   

ಶ್ರೀನಗರ: ಕಾಶ್ಮೀರಿ ಪಂಡಿತ ನೌಕರನ ರಾಹುಲ್‌ ಭಟ್‌ ಹತ್ಯೆಗೆ ಸಂಬಂಧಿಸಿದ ತನಿಖೆಗಾಗಿ ಜಮ್ಮು ಮತ್ತು ‌ಕಾಶ್ಮೀರ ಆಡಳಿತವು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದೆ.

ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರ ಕಚೇರಿಯ ಖಾತೆಯು ಟ್ವೀಟಿಸಿದೆ. ಉಗ್ರರ ನೀಚ ಕೃತ್ಯದ ಕುರಿತು ಎಲ್ಲ ಆಯಾಮಗಳಲ್ಲಿಯೂ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನು ರೂಪಿಸಲು ನಿರ್ಧರಿಸಿರುವುದಾಗಿ ಹಂಚಿಕೊಳ್ಳಲಾಗಿದೆ.

'ರಾಹುಲ್‌ ಭಟ್‌ ಅವರ ಹೆಂಡತಿಗೆ ಜಮ್ಮುವಿನಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಹಾಗೂ ಕುಟಂಬಕ್ಕೆ ಹಣಕಾಸು ಸಹಕಾರ ಒದಗಿಸಲಾಗುತ್ತದೆ. ಸರ್ಕಾರವು ಅವರ ಮಗಳ ಶಿಕ್ಷಣದ ವೆಚ್ಚವನ್ನು ಭರಿಸಲಿದೆ' ಎಂದು ಟ್ವೀಟಿಸಲಾಗಿದೆ.

ADVERTISEMENT

ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಯಲ್ಲಿ ಗುರುವಾರ ಉಗ್ರನೊಬ್ಬ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್‌ ಭಟ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನು. ಅವರು ತಹಶೀಲ್‌ ಕಚೇರಿಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊಠಡಿಯನ್ನುಏಕಾಏಕಿ ಪ್ರವೇಶಿಸಿದ ಉಗ್ರ ಗುಂಡು ಹಾರಿಸಿದ್ದನು.

ಇತ್ತೀಚೆಗೆ ಕಾಶ್ಮೀರವನ್ನು ನುಸುಳಿದ್ದ ಪಾಕಿಸ್ತಾನ ಮೂಲದ ಇಬ್ಬರು ಲಷ್ಕರ್‌–ಎ–ತೈಯಬ(ಎಲ್‌ಇಟಿ) ಸಂಘಟನೆಯ ಇಬ್ಬರು ಉಗ್ರರನ್ನು ಶುಕ್ರವಾರ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.