ನವದೆಹಲಿ: ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯ ಹುಡುಕಾಟ ನಡೆದಿದೆಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಸ್ಥಾನಕ್ಕೆ ಅವರ ನೇಮಕಾತಿ ಸಾಧ್ಯತೆಯ ಬಗ್ಗೆಯೂ ಚರ್ಚೆಗಳು ಗರಿಗೆದರಿವೆ.
ಪ್ರಸ್ತುತ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಗಿರುವ ರಾಜೀವ್ ಮಹರ್ಷಿ ಅವರು ಇದೇ ವಾರ ನಿವೃತ್ತರಾಗುವ ಕಾರಣ ಈ ಸ್ಥಾನ ತೆರವಾಗಲಿದೆ. ಈ ಸಾಂವಿಧಾನಿಕ ಹುದ್ದೆಯನ್ನು ಖಾಲಿಬಿಡುವಂತಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ, ಇಂಡಿಯನ್ ಎಕ್ಸ್ಪ್ರೆಸ್, ಆಜ್ತಕ್ ಸೇರಿ ಹಲವು ಜಾಲತಾಣಗಳುವರದಿ ಮಾಡಿದೆ.
1985ರ ಬ್ಯಾಚ್ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿ ಮುರ್ಮು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದರು. ಮೋದಿ ಪ್ರಧಾನಿಯಾದ ನಂತರ ಈ ಅಧಿಕಾರಿಯೂ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಗೆನಿಯೋಜನೆಗೊಂಡರು.
ಕಳೆದ ನವೆಂಬರ್ 30ರಂದು ಮುರ್ಮು ನಿವೃತ್ತರಾಗಬೇಕಿತ್ತು. ಅಷ್ಟರೊಳಗೆ, ಕಳೆದ ಅಕ್ಟೋಬರ್ನಲ್ಲಿ ಅವರನ್ನು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಯಿತು.
ಜಮ್ಮು ಕಾಶ್ಮೀರದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರ ಪ್ರಕಾರ, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಬೇಕು ಎಂದು ಕೇಂದ್ರ ನಿರೀಕ್ಷಿಸುತ್ತಿದ್ದರೆ ರಾಜಕಾರಿಣಿಗಳ ಒಡನಾಟ ಹೊಂದಿರುವವರನ್ನೇ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನೇಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ವರ್ಷ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪುನರ್ ವಿಂಗಡನೆ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.