ಪಣಜಿ: ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಇಲ್ಲಿ ಮಹದಾಯಿ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸದೇ ನುಣುಚಿಕೊಂಡರು.
ವಿವಾದ ಕುರಿತು ಕೇಂದ್ರದ ನಿಲುವೇನು ಎಂಬ ಪ್ರಶ್ನೆಗೆ, ‘ಇದಕ್ಕೆ ಮುಖ್ಯಮಂತ್ರಿ ಉತ್ತರಿಸುತ್ತಾರೆ. ವಿಷಯ ಕೋರ್ಟ್ನಲ್ಲಿ ಇದ್ದು, ಈ ಸಂಬಂಧ ಯಾವುದೇ ಬೆಳವಣಿಗೆ ಆಗುತ್ತಿಲ್ಲ’ ಎಂದು ಜಾವಡೇಕರ್ ಪ್ರತಿಕ್ರಿಯಿಸಿದರು.
ಸಚಿವರು ಪ್ರತಿಕ್ರಿಯಿಸಲು ನಿರಾಕರಿಸಿದ್ದರ ಕುರಿತು ಟ್ವೀಟ್ ಮಾಡಿರುವ ಗೋವಾದ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್, ‘ಉತ್ತರಿಸದ ಧೋರಣೆಯು, ರಾಜಕೀಯ ಲಾಭಕ್ಕೆಬಿಜೆಪಿಯು ಗೋವಾದ ಜೀವನದಿಯನ್ನು ಕರ್ನಾಟಕಕ್ಕೆ ಮಾರಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ’ ಎಂದು ಟೀಕಿಸಿದ್ದಾರೆ.
ಮಹದಾಯಿ ಕುರಿತು ಚರ್ಚಿಸುವುದಕ್ಕೆ ಸಚಿವರ ಭೇಟಿಗೆ ಅವಕಾಶ ನಿರಾಕರಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು, ಅವರು ವಾಸ್ತವ್ಯ ಹೂಡಿದ್ದ ರೆಸಾರ್ಟ್ ಎದುರು ಧರಣಿ ನಡೆಸಿದ್ದರು. ಪ್ರತಿಭಟನೆ ಸಂಬಂಧ 13 ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
‘ಮಧ್ಯವರ್ತಿಗಳಿಗೇ ಮಧ್ಯವರ್ತಿಗಳು’:
ಕೃಷಿ ಮಸೂದೆಗಳನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು ಈ ಮೂಲಕ ‘ಮಧ್ಯವರ್ತಿಗಳಿಗೆ ಮಧ್ಯವರ್ತಿಗಳಾಗಿ’ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ.
ಮಸೂದೆ ಕುರಿತು ಕೃಷಿಕರ ಆತಂಕ ನಿವಾರಿಸಲು ಕೃಷಿಕರ ಸಂಘಟನೆಗಳ ಜೊತೆ ಚರ್ಚಿಸಲು ಎರಡು ದಿನಗಳ ಭೇಟಿಗೆ ಇಲ್ಲಿಗೆ ಬಂದಿದ್ದಾರೆ. ‘ರೈತರಿಗೆ ಕಡಿಮೆ ಲಾಭ ಸಿಗುತ್ತಿದೆ. ಗ್ರಾಹಕರು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಬೇಕಾಗಿದೆ. ಇದು, ಈಗಿನ ವಾಸ್ತವ’ ಎಂದರು.
ಮಧ್ಯವರ್ತಿಗಳು ಕೃಷಿ ಉತ್ಪನ್ನಗಳ ದರ ಏರಿಸುತ್ತಾರೆ. ಈ ಸಮಸ್ಯೆಯನ್ನು ನೀಗಿಸುವುದು ಮಸೂದೆಯ ಉದ್ದೇಶ. ಈಗಿನ ಪ್ರತಿಭಟನೆ ಗಮನಿಸಿದರೆ ವಿರೋಧವು ಮಧ್ಯವರ್ತಿಗಳು ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿರುವಂತೆಯೇ ಇದೆ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.