ADVERTISEMENT

ನೆಹರು, ವಾಜಪೇಯಿ ಇಬ್ಬರೂ ಮಾದರಿ ನಾಯಕರು: ನಿತಿನ್‌ ಗಡ್ಕರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2021, 11:33 IST
Last Updated 20 ಆಗಸ್ಟ್ 2021, 11:33 IST
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಸಾಂದರ್ಭಿಕ ಚಿತ್ರ
ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಟೀಕಾಪ್ರಹಾರಕ್ಕೆ ಸಂಬಂಧಿಸಿ ಉಭಯ ಪಕ್ಷಗಳು ಘನತೆಯನ್ನು ಕಾಪಾಡಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಿವಿಮಾತು ಹೇಳಿದ್ದಾರೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸಾರ್ವಜನಿಕ ಹೇಳಿಕೆ ನೀಡುವಾಗ ಅಂಕೆಯಲ್ಲಿರಬೇಕು. ಘನತೆಯಿಂದ ನಡೆದುಕೊಳ್ಳಬೇಕು. ಇಬ್ಬರು ಮಾಜಿ ಪ್ರಧಾನಿಗಳು ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಾದರಿ ನಾಯಕರು ಎಂದು ನಿತಿನ್‌ ಗಡ್ಕರಿ ಹೇಳಿದ್ದಾರೆ.

'ವಾಜಪೇಯಿ ಮತ್ತು ನೆಹರು ಇಬ್ಬರೂ ಭಾರತದ ಮಾದರಿ ನಾಯಕರು. ಇಬ್ಬರು ಪ್ರಜಾಪ್ರಭುತ್ವದ ನಿಷ್ಠೆಗೆ ಪ್ರಶಸ್ತ್ಯ ನೀಡಿದ್ದಾರೆ. ಅಟಲ್‌ ಜೀ ಅವರ ಕೊಡುಗೆ ನಮಗೆ ಸ್ಪೂರ್ತಿಯಾಗಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ನೆಹರೂ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ' ಎಂದು ನಿತಿನ್‌ ಗಡ್ಕರಿ 'ನ್ಯೂಸ್‌ ನೇಷನ್'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ಮುಂಗಾರು ಅಧಿವೇಶನದಲ್ಲಿ ಪೆಗಾಸಸ್‌ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ನಡೆಸಿದ ಗದ್ದಲಕ್ಕೆ ಸಂಬಂಧಿಸಿ ಮಾತನಾಡಿದ ಗಡ್ಕರಿ, 'ಎಲ್ಲ ಪಕ್ಷಗಳು ಆತ್ಮಶೋಧನೆ ನಡೆಸಬೇಕು. ಇವತ್ತು ಪ್ರತಿಪಕ್ಷದಲ್ಲಿರುವವರು ನಾಳೆ ಆಡಳಿತಕ್ಕೆ ಬರಬಹುದು. ಇವತ್ತು ಆಡಳಿತ ನಡೆಸುತ್ತಿರುವವರು ನಾಳೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಬಹುದು. ಕರ್ತವ್ಯ ಬದಲಾಗುತ್ತಿರುತ್ತದೆ. ನಾನೂ ಮಹಾರಾಷ್ಟ್ರದ ಅಸೆಂಬ್ಲಿಯಲ್ಲಿ ಹಲವು ವರ್ಷಗಳ ವರೆಗೆ ಪಕ್ಷವನ್ನು ಮುನ್ನೆಡೆಸಿದ್ದೇನೆ' ಎಂದರು.

ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಎರಡು ಚಕ್ರಗಳು. ಕಾಂಗ್ರೆಸ್‌ ಪ್ರಬಲ ಪ್ರತಿಪಕ್ಷವಾಗಿ ಹೊಮ್ಮಬೇಕು ಮತ್ತು ಜವಾಬ್ದಾರಿಯುತ ಪ್ರತಿಪಕ್ಷವಾಗಬೇಕು ಎಂದು ಗಡ್ಕರಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.